ADVERTISEMENT

ವರದಕ್ಷಿಣೆ ಕಿರುಕುಳ: ಚಿರಂಜೀವಿ ಪುತ್ರಿ ಆರೋಪ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST
ವರದಕ್ಷಿಣೆ ಕಿರುಕುಳ: ಚಿರಂಜೀವಿ ಪುತ್ರಿ ಆರೋಪ
ವರದಕ್ಷಿಣೆ ಕಿರುಕುಳ: ಚಿರಂಜೀವಿ ಪುತ್ರಿ ಆರೋಪ   

ಹೈದರಾಬಾದ್: ಮನೆಯಿಂದ ಓಡಿ ಹೋಗಿ ತನ್ನ ಕಾಲೇಜು ಸಹಪಾಠಿಯನ್ನು ಮದುವೆಯಾಗಿದ್ದ ಖ್ಯಾತ ತೆಲುಗು ಚಿತ್ರನಟ ಚಿರಂಜೀವಿ ಅವರ ಪುತ್ರಿ ಶ್ರೀಜಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.ವರದಕ್ಷಿಣೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಶ್ರೀಜಾ ಅವರು ಪತಿ ಜಿ.ಶಿರೀಷ್ ಭಾರದ್ವಾಜ್ ವಿರುದ್ಧ ಹೈದರಾಬಾದ್‌ನ ಕೇಂದ್ರೀಯ ಅಪರಾಧ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.

‘ನನ್ನ ಪತಿ ಸ್ಥಗಿತಗೊಳಿಸಿದ್ದ ಉದ್ದಿಮೆ-ವ್ಯವಹಾರವನ್ನು ಮತ್ತೆ ಆರಂಭಿಸಲಿ ಎಂದು ಚಿನ್ನಾಭರಣ ಸೇರಿದಂತೆ ಹಲವು ಕೋಟಿ ರೂಪಾಯಿ ಆತನಿಗೆ ನೀಡಿದ್ದೇನೆ. ಇಷ್ಟಾದರೂ ಮತ್ತೆ ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸಲು 1.5 ಕೋಟಿ ರೂಪಾಯಿ ಬೇಕೆಂದು ಕೇಳಿದ್ದ. ಈ ಹಣ ನೀಡಲು ನಿರಾಕರಿಸಿದ ನನಗೆ ಆತ ಕಳೆದ ಕೆಲವು ತಿಂಗಳಿಂದ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾನೆ’ ಎಂದು ಶ್ರೀಜಾ ದೂರಿನಲ್ಲಿ ವಿವರಿಸಿದ್ದಾರೆ.

‘ಶಿರೀಷ್‌ಗೆ ಮೊದಲಿನಿಂದಲೂ ನನ್ನ ಆಸ್ತಿ ಮೇಲೆಯೇ ಕಣ್ಣಿತ್ತು. ಮದುವೆಯಾದ ದಿನದಿಂದಲೂ ಆತ ನನ್ನನ್ನು ಪೀಡಿಸುತ್ತಲೇ ಇದ್ದಾನೆ. ಇದರಿಂದ ನಾನು ಚಿಂತಾಕ್ರಂತಳಾದ ನಾನು ಅಭದ್ರತೆಯ ಭಾವನೆಯಿಂದ ನನ್ನೆಲ್ಲಾ ಆಸ್ತಿಯನ್ನು ನನ್ನ ಪೋಷಕರ ಹೆಸರಿಗೆ ವರ್ಗಾಯಿಸಿದೆ. ಅಂದಿನಿಂದ ಅವನು ನನಗೆ ಇನ್ನಷ್ಟು ಹೆಚ್ಚು ಕಿರುಕುಳ ನೀಡಲು ಪ್ರಾರಂಭಿಸಿದ’ ಎಂದು ಆಕೆ ವಿವರಿಸಿದ್ದಾರೆ. ವಿವಾಹಿತ ಪತ್ನಿಯನ್ನು ಕ್ರೂರವಾಗಿ ನಡೆಸಿಕೊಂಡಿದ್ದಕ್ಕೆ ಶಿರೀಷ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷೆನ್ 498-ಎ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.