ನವದೆಹಲಿ: ‘ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆ ವಿಳಂಬವಾಗಲು ರಾಹುಲ್ ಗಾಂಧಿ ಕಾರಣ’ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
‘ವಿಳಂಬಕ್ಕೆ ಸುಬ್ರಮಣಿಯನ್ ಸ್ವಾಮಿಯೇ ಕಾರಣ’ ಎಂದು ರಾಹುಲ್ ಮತ್ತು ಸೋನಿಯಾ ಗಾಂಧಿ ಪರ ವಕೀಲರು ಆರೋಪಿಸಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮುಖ್ಯ ದಾಖಲೆಗಳನ್ನು ಆರೋಪಿಗಳು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದಾರೆ. ಆ ದಾಖಲೆಗಳನ್ನು ಇಲ್ಲೂ ಸಲ್ಲಿಸಿದರೆ ವಿಚಾರಣೆಗೆ ಅನುಕೂಲವಾಗಲಿದೆ. ಆದರೆ, ಆರೋಪಿಗಳು ಆ ದಾಖಲೆಗಳನ್ನು ಸಲ್ಲಿಸುತ್ತಿಲ್ಲ’ ಎಂದು ದೆಹಲಿ ನ್ಯಾಯಾಲಯದಲ್ಲಿ ಶುಕ್ರವಾರ ನಡೆದ ವಿಚಾರಣೆಯಲ್ಲಿ ಸ್ವಾಮಿ ಆರೋಪಿಸಿದರು.
ಅಲ್ಲದೆ, ಯಂಗ್ ಇಂಡಿಯನ್ ಸಂಸ್ಥೆಯ ವಿರುದ್ಧ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ ಎಂದು ದಾಖಲೆಯೊಂದರ ಪ್ರತಿಯನ್ನು ನ್ಯಾಯಾಲಯಕ್ಕೆ ಸ್ವಾಮಿ ಸಲ್ಲಿಸಿದರು. ‘ನಮ್ಮ ಮನೆಯ ಆವರಣದಲ್ಲಿ ಎಸೆದಿದ್ದ ದಿನಪತ್ರಿಕೆಯ ಜತೆ ಈ ದಾಖಲೆ ಇತ್ತು. ಇವನ್ನು ಪರಿಶೀಲಿಸಬೇಕು’ ಎಂದು ಸ್ವಾಮಿ ಮನವಿ ಮಾಡಿಕೊಂಡರು.
‘ಅರ್ಜಿದಾರರು ಪ್ರತಿ ವಿಚಾರಣೆ ವೇಳೆಯೂ ಒಂದೊಂದು ಮನವಿ ಹಿಡಿದುಕೊಂಡು ಬರುತ್ತಾರೆ. ಸಂಬಂಧವೇ ಇಲ್ಲದ ದಾಖಲೆಗಳನ್ನು ಸಲ್ಲಿಸುತ್ತಾರೆ. ಅವರು ಈವರೆಗೆ ಯಾವ ಮೂಲ ದಾಖಲೆಗಳನ್ನು ಸಲ್ಲಿಸಿಯೇ ಇಲ್ಲ. ಅವರು ಸಲ್ಲಿಸಿರುವುದೆಲ್ಲಾ ದಾಖಲೆಗಳ ಛಾಯಾಪ್ರತಿಗಳು. ಅವನ್ನು ಯಾರೂ ದೃಢೀಕರಿಸಿಲ್ಲ. ವಿಚಾರಣೆ ವಿಳಂಬವಾಗಲಿ ಎಂದೇ ಅವರು ಹೀಗೆ ಮಾಡುತ್ತಿದ್ದಾರೆ’ ಎಂದು ರಾಹುಲ್ ಪರ ವಕೀಲರು ಆರೋಪಿಸಿದರು.
‘ಅರ್ಜಿದಾರರು ಅತ್ಯಂತ ಗಣ್ಯ ವ್ಯಕ್ತಿ. ಅವರಿಗೆ ಝಡ್ ಪ್ಲಸ್ ಶ್ರೇಣಿಯ ಭದ್ರತೆ ನೀಡಲಾಗಿದೆ. ಅಷ್ಟು ಬಿಗಿ ಭದ್ರತೆ ಇದ್ದಾಗಲೂ ಅವರ ಮನೆಯ ಆವರಣಕ್ಕೆ ಯಾರೋ ಬಂದು ದಾಖಲೆಗಳನ್ನು ಎಸೆದು ಹೋಗಿದ್ದಾರೆ ಎಂದು ಅವರೇ ಹೇಳಿದ್ದಾರೆ. ಹೀಗಿದ್ದಾಗ ಮನೆಯ ಆರಣಕ್ಕೆ ಮುಂದೊಂದು ದಿನ ಮತ್ಯಾರೋ ಕಲ್ಲನ್ನೋ ಅಥವಾ ಮತ್ತೇನನ್ನೋ ಎಸೆದು ಹೋಗಬಹುದು. ಇದು ಭದ್ರತಾ ವ್ಯವಸ್ಥೆಯಲ್ಲಾಗಿರುವ ಲೋಪ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ’ ಎಂದು ಅವರು ನ್ಯಾಯಾಧೀಶರ ಎದುರು ಮನವಿ ಮಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.