ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಗೆ ವಿದೇಶಿ ವಕೀಲರು ಪ್ರವೇಶಿಸಿದರೆ ಕಾನೂನು ವ್ಯವಸ್ಥೆಯ ಸುಧಾರಣೆ ಆಗಬಹುದು ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಖೇಹರ್ ಅಭಿಪ್ರಾಯಪಟ್ಟರು.
‘ವಿದೇಶಿ ವಕೀಲರ ಪ್ರವೇಶದಿಂದ ವೃತ್ತಿಗೆ ಧಕ್ಕೆ ಆಗಬಹುದು ಎಂದು ದೇಶೀಯ ವಕೀಲರು ಆತಂಕಪಡಬೇಕಾಗಿಲ್ಲ. ನಮ್ಮ ದೇಶದ ವಕೀಲರು ತುಂಬಾ ಸಮರ್ಥರಿದ್ದು, ಎಂತಹ ಸ್ಪರ್ಧಾತ್ಮಕ ವಾತಾವರಣದಲ್ಲೂ ತಮ್ಮ ಛಾಪನ್ನು ಮೂಡಿಸುತ್ತಾರೆ’ ಎಂದು ಹೇಳಿದರು.
ಇತರ ರಾಷ್ಟ್ರಗಳಲ್ಲಿ ನಮ್ಮ ವಕೀಲರಿಗೂ ವೃತ್ತಿ ನಡೆಸುವ ಅವಕಾಶವೂ ಇರಬೇಕು ಎಂದು ಖೇಹರ್ ಪ್ರತಿಪಾದಿಸಿದರು. ವಿದೇಶಿ ವಕೀಲರಿಗೆ ಪ್ರವೇಶ ನೀಡುವುದರಿಂದ ಸ್ಪರ್ಧೆ ಹೆಚ್ಚಿ ವೃತ್ತಿ ನೈಪುಣ್ಯವೂ ಹೆಚ್ಚುತ್ತದೆ ಎಂದು ಅವರು ವಿವರಿಸಿದರು.
1961ರ ವಕೀಲರ ಕಾಯ್ದೆಯ ಪ್ರಕಾರ ಭಾರತೀಯ ಪ್ರಜೆ ಮಾತ್ರ ದೇಶದಲ್ಲಿ ವಕೀಲಿ ವೃತ್ತಿ ನಡೆಸಲು ಅವಕಾಶವಿದೆ. ಆದರೆ ಕಳೆದ ವರ್ಷ ಭಾರತೀಯ ವಕೀಲರ ಪರಿಷತ್ ಸಿದ್ಧಪಡಿಸಿರುವ ಕರಡು ನಿಯಮದಲ್ಲಿ ವಿದೇಶಿ ವಕೀಲರಿಗೆ ನಿರ್ದಿಷ್ಟ ಪ್ರಕರಣಗಳಲ್ಲಿ ವೃತ್ತಿ ನಡೆಸಲು ಅವಕಾಶವಿದೆ. ಇದಕ್ಕೆ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.