ADVERTISEMENT

ವೋಟಿಗಾಗಿ ನೋಟು ಪ್ರಕರಣ: ಅಮರ್‌ಸಿಂಗ್‌ಗೆ ಷರತ್ತುಬದ್ಧ ಜಾಮೀನು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ವೋಟಿಗಾಗಿ ನೋಟು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸಮಾಜವಾದಿ ಪಕ್ಷದ ಮಾಜಿ ಮುಖಂಡ ಹಾಗೂ ರಾಜ್ಯಸಭೆ ಸದಸ್ಯ ಅಮರ್‌ಸಿಂಗ್ ಅವರಿಗೆ ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಹಾಗಾಗಿ ಅಮರ್‌ಸಿಂಗ್‌ಗೆ ಸ್ವಲ್ಪ ನಿರಾಳವಾಗಿದೆ. 2008ರಲ್ಲಿ ನಡೆದ ವೋಟಿಗಾಗಿ ನೋಟು ಹಗರಣದಲ್ಲಿ ದೆಹಲಿ ಪೊಲೀಸರು ಸಿಂಗ್ ಅವರನ್ನು ಬಂಧಿಸಿದ್ದರು. ಕೆಳ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿತ್ತು.
ನ್ಯಾಯಾಂಗ ಬಂಧನದಲ್ಲಿ ಇದ್ದುಕೊಂಡೇ ಇಲ್ಲಿನ ಏಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಂಗ್ ಐವತ್ತು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್  ನೀಡಬೇಕು  ಮತ್ತು ನ್ಯಾಯಾಲಯಕ್ಕೆ ಮಾಹಿತಿ ನೀಡದೇ ವಿದೇಶಕ್ಕೆ ತೆರಳದಂತೆ ಷರತ್ತು ವಿಧಿಸಲಾಗಿದೆ.

ನ್ಯಾಯಮೂರ್ತಿ ಸುರೇಶ್ ಕೈತ್ ಅವರು ಅಮರ್ ಸಿಂಗ್ ತಮ್ಮ ಪಾಸ್‌ಪೋರ್ಟನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆಯೂ ಸೂಚಿಸಿದರು. ಕೆಳ ನ್ಯಾಯಾಲಯದ ಆದೇಶ  ಪ್ರಶ್ನಿಸಿ ಸಿಂಗ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಆದರೆ ಕೆಳ ನ್ಯಾಯಾಲಯ ಸಿಂಗ್ ಅವರಿಗೆ ಚಿಕಿತ್ಸೆಗೆ ಸಂಬಂಧಿಸಿದಂತೆ ಸೆ.15ರಂದು ಮಧ್ಯಂತರ ಜಾಮೀನು ನೀಡಿತ್ತು. ಸೆ.28ರವರೆಗೆ ಮಧ್ಯಂತರ ಜಾಮೀನು ಮುಂದುವರೆಯಿತು. ಸಿಂಗ್ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸನ ವೈದ್ಯರು ನೀಡಿದ ವರದಿ ಆಧಾರದಲ್ಲಿ ಪುನಃ ಬಂಧಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು.

ಸುಬ್ರಹ್ಮಣಿಯನ್ ಅರ್ಜಿ ವಿಚಾರಣೆ ಮುಂದಕ್ಕೆ

ನವದೆಹಲಿ (ಪಿಟಿಐ):  2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಗೃಹ ಸಚಿವ ಪಿ.ಚಿದಂಬರಂ ಅವರನ್ನೂ ಸೇರಿಸುವಂತೆ ಕೋರಿ ಜನತಾಪಕ್ಷದ ಅಧ್ಯಕ್ಷ ಸುಬ್ರಹ್ಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆ ಯನ್ನು ನವೆಂಬರ್ 8ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ಸ್ವಾಮಿ ಅವರು, ಚಿದಂಬರಂ ಅವರನ್ನು ಪ್ರಕರಣದಲ್ಲಿ ಸೇರಿಸಬೇಕು ಎಂದು  ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದು, ಇತ್ಯರ್ಥವಾಗಿಲ್ಲ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.

ಸೆ,15ರಂದು ಸ್ವಾಮಿ ನ್ಯಾಯಾಲ ಯದಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಹೇಳಿಕೆ ಯನ್ನು ಹೊಸದಾಗಿ ಪಡೆಯಬೇಕು. ಚಿದಂಬರಂ ಅವರು ಹಗರಣದಲ್ಲಿ ಭಾಗಿ ಯಾಗಿರುವ ಅಂಶವನ್ನು ಸೇರಿಸಬೇಕಾ ಗಿದೆ ಎಂದು ಮನವಿ ಮಾಡಿಕೊಂಡಿದ್ದರು.

2ಜಿ ಸ್ಪೆಕ್ಟ್ರಂ ದರಗಳನ್ನು ನಿಗದಿ ಮಾಡುವ ಸಂದರ್ಭದಲ್ಲಿ ಚಿದಂಬರಂ ಮತ್ತು ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಅವರು ಸೇರಿ ನಿರ್ಧಾರ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಚಿದಂಬರಂ ಅವರ ಪಾತ್ರವೂ ಹಗರಣದಲ್ಲಿ ಅಡಗಿದೆ ಎಂದು ವಾದ ಮಂಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.