ADVERTISEMENT

ವ್ಯಂಗ್ಯ ಚಿತ್ರ: ಮತ್ತೊಂದು ದೂರು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ಮಿಡ್ನಾಪುರ (ಪಿಟಿಐ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವ್ಯಂಗ್ಯ ಚಿತ್ರ ಹುಟ್ಟುಹಾಕಿದ್ದ ವಿವಾದ ತಣ್ಣಗಾಗುತ್ತಿರುವಂತೆಯೇ,  ಮಿಡ್ನಾಪುರ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಒಬ್ಬರು  ಮಮತಾ ಅವರ ಮತ್ತೊಂದು ವ್ಯಂಗ್ಯಚಿತ್ರದ ಕುರಿತಂತೆ ಇಬ್ಬರ ವಿರುದ್ಧ ದೂರು ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಅವರನ್ನು ಅವಹೇಳನಾಕಾರಿಯಾಗಿ ಚಿತ್ರಸಿರುವ ವ್ಯಂಗ್ಯಚಿತ್ರವನ್ನು ಇಬ್ಬರು ವ್ಯಕ್ತಿಗಳು ಹಂಚುತ್ತಿದ್ದಾರೆ ಎಂದು  ಡಾ. ವಿಕ್ರಮ್ ಸಹಾ ಎಂಬುವವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಔಷಧ ವೈದ್ಯಶಾಸ್ತ್ರದ ಸಹಾಯಕ ಪ್ರೊಫೆಸರ್ ಆಗಿರುವ ಸಹಾ  ಪ್ರೊಲಾಯ್ ಮಿತ್ರಾ ಮತ್ತು ಚಿನ್ಮಯ್ ರಾವ್ ಎಂಬುವವರ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಇಬ್ಬರು ಇ-ಮೇಲ್ ಮೂಲಕ ತಮಗೆ ಮಮತಾ ಬ್ಯಾನರ್ಜಿ ವ್ಯಂಗ್ಯಚಿತ್ರವೊಂದನ್ನು ಕಳುಹಿಸಿದ್ದು, ಅದರಲ್ಲಿ ಬ್ಯಾನರ್ಜಿ ಅವರ ತಲೆ ಭಾಗವನ್ನು  ಚಿತ್ರಿಸಲಾಗಿಲ್ಲ.

`ನಮ್ಮ ಮುಖ್ಯಮಂತ್ರಿ ತಲೆಯನ್ನು ಕಳೆದುಕೊಂಡಿದ್ದಾರೆ~ ಎಂಬ ವಾಕ್ಯವನ್ನು ಚಿತ್ರದಲ್ಲಿ ಬರೆಯಲಾಗಿದೆ~ ಎಂದು ದೂರಿನಲ್ಲಿ ಅವರು ಆರೋಪಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.ಬ್ಯಾನರ್ಜಿ ಮತ್ತು ಅವರ ಪಕ್ಷದ ಸಹೋದ್ಯೋಗಿ ಮುಕುಲ್ ರಾಯ್ ಅವರನ್ನು ಟೀಕಿಸುವ  ವ್ಯಂಗ್ಯ ಚಿತ್ರವನ್ನು ಕಳುಹಿಸಿದ್ದಕ್ಕೆ ಜಾಧವಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಎ ಮಹಾಪಾತ್ರ ಎಂಬುವವರು ಜೈಲುಪಾಲಾದ ಘಟನೆ ನಡೆದ ಕೆಲವೇ ದಿನಗಳಲ್ಲಿ ಈ ಹೊಸ ಪ್ರಕರಣ ನಡೆದಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.