ಥಾಣೆ (ಪಿಟಿಐ): ವ್ಯಭಿಚಾರದಲ್ಲಿ ತೊಡಗಲು ನಿರಾಕರಿದ್ದಕ್ಕಾಗಿ 24ರ ಹರೆಯದ ಮಹಿಳೆಯೊಬ್ಬರ ಸ್ತನಗಳನ್ನು ವೇಶ್ಯಾಗೃಹದ ಮಾಲಕಿ ಸೇರಿದಂತೆ ಮೂವರು ಸೇರಿ ಕತ್ತರಿಸಿದ ಬರ್ಬರ ಘಟನೆ ಇಲ್ಲಿನ ಭಿವಂಡಿಯಲ್ಲಿ ಘಟಿಸಿದೆ ಎಂದು ಪೊಲೀಸರು ಭಾನುವಾರ ಇಲ್ಲಿ ತಿಳಿಸಿದರು.
ವೇಶ್ಯಾಗೃಹ ನಡೆಸುತ್ತಿದ್ದ 34ರ ಹರೆಯದ ಮಹಿಳೆಯನ್ನು ಶನಿವಾರ ಬಂಧಿಸಲಾಗಿದ್ದು ರೂಬಿ ಎಂಬುದಾಗಿ ಗುರುತಿಸಲಾಗಿದೆ. ಅಪರಾಧ ಕೃತ್ಯದಲ್ಲಿ ಷಾಮೀಲಾಗಿದ್ದ ಆಲಂ ಮತ್ತು ಅಫ್ರಾಜ್ ಎಂಬ ಇಬ್ಬರು ಪುರುಷ ಸಹಚರರು ತಲೆ ಮರೆಸಿಕೊಂಡಿದ್ದಾರೆ. ಮಾರ್ಚ್ 19ರಂದು ಈ ಬರ್ಬರ ಘಟನೆ ಘಟಿಸಿದೆ ಎಂದು ಪೊಲೀಸರು ಹೇಳಿದರು.
ದುಷ್ಕೃತ್ಯಕ್ಕೆ ಬಲಿಯಾಗಿರುವ ಮಹಿಳೆಯನ್ನು ಗುಜರಾತಿನಿಂದ ಭಿವಂಡಿಗೆ ಕರೆತಂದು ವೇಶ್ಯಾಗೃಹಕ್ಕೆ ಮಾರಲಾಗಿತ್ತು. ಅಲ್ಲಿ ಆಕೆಯನ್ನು ವ್ಯಭಿಚಾರಕ್ಕೆ ಇಳಿಯುವಂತೆ ಒತ್ತಾಯಿಸಲಾಗಿತ್ತು ಎಂದು ಕುಂಭಾರವಾಡ- ಭಿವಂಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ರಾಜನ್ ಸಾಸ್ತೆ ಪಿಟಿಐಗೆ ತಿಳಿಸಿದರು.
'ವ್ಯಭಿಚಾರಕ್ಕೆ ಇಳಿಯುವಂತೆ ವೇಶ್ಯಾಗೃಹದ ಮಾಲಕಿ ಮಾಡಿದ ಆದೇಶವನ್ನು ಮಹಿಳೆ ತಿರಸ್ಕರಿಸಿದಾಗ ಮೂವರೂ ಸೇರಿ ಆಕೆಯ ಸ್ತನಗಳನ್ನು ಕತ್ತರಿಸಿದರು' ಎಂದು ಸಾಸ್ತೆ ನುಡಿದರು.
ಮಹಿಳೆಯ ಮೇಲೆ ಹಲ್ಲೆ ಕೂಡಾ ನಡೆಸಲಾಗಿದ್ದು ಆಕೆಯ ಹಲ್ಲುಗಳನ್ನು ಆರೋಪಿಗಳು ಮುರಿದುಹಾಕಿದ್ದಾರೆ ಎಂದು ಅವರು ನುಡಿದರು.
ಬಳಿಕ ಕೆಲವು ವ್ಯಕ್ತಿಗಳು ಆಕೆಯನ್ನು ರಕ್ಷಿಸಿ ಭಿವಂಡಿಯ ಐಜಿಎಂ ಆಸ್ಪತ್ರೆಗೆ ಒಯ್ದರು. ಬಳಿಕ ಆಕೆಯನ್ನು ಥಾಣೆ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಮಾನಸಿಕ ಆಘಾತ ಮತ್ತು ಚಿತ್ರಹಿಂಸೆಗೆ ಗುರಿಯಾಗಿರುವ ಕಾರಣ ಮಹಿಳೆ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಪೊಲೀಸರು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಬಂಧಿತ ವೇಶ್ಯಾಗೃಹದ ಮಾಲಕಿಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಲಾಗಿದ್ದು, ಮ್ಯಾಜಿಸ್ಟ್ರೇಟರು ಹೆಚ್ಚಿನ ವಿಚಾರಣೆಗಾಗಿ ಮಾರ್ಚ್ 25ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.