ADVERTISEMENT

ಶಬರಿಮಲೆಯಲ್ಲಿ ಕನ್ನಡ ಭಕ್ತಿಗೀತೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ತಿರುವನಂತಪುರ (ಪಿಟಿಐ): ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಇನ್ನು ಮುಂದೆ ಕನ್ನಡದ ಭಕ್ತಿಗೀತೆಯನ್ನು ಆಲಿಸಬಹುದು. ಇಲ್ಲಿಯವರೆಗೆ ಮಲೆಯಾಳಂ ಮತ್ತು ಸಂಸ್ಕೃತ ಭಕ್ತಿಗೀತೆಗಳನ್ನು ಮಾತ್ರ ಪ್ರಸಾರ ಮಾಡಲಾಗುತ್ತಿತ್ತು.  ಹಾಲಿ ಇರುವ ಎರಡು ಭಾಷೆಗಳ ಜತೆ ನಾಲ್ಕು ಭಾರತೀಯ ಭಾಷೆಗಳ ಭಕ್ತಿಗೀತೆಗಳನ್ನು ಬುಧವಾರದಿಂದ ದೇವಸ್ಥಾನದಲ್ಲಿ  ಪ್ರಸಾರ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ.

ಶಬರಿಮಲೆ ದೇಶದ ಎಲ್ಲಾ ಭಾಗಗಳಿಂದಲೂ ಭಕ್ತರನ್ನು ಸೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ಪ್ರಕಟಣೆ ತಿಳಿಸಿದೆ.

ಇನ್ನು ಮುಂದೆ ಮುಂಜಾನೆ ಗರ್ಭ ಗುಡಿ ತೆರೆಯುವಾಗ ಮತ್ತು ಸಂಜೆ ದೇವಸ್ಥಾನ ಮುಚ್ಚುವಾಗ ಮಲೆಯಾಳಂ ಮತ್ತು ಸಂಸ್ಕೃತ ಗೀತೆಯೊಂದಿಗೆ ಹಿಂದಿ, ತಮಿಳು, ತೆಲಗು ಮತ್ತು ಕನ್ನಡ ಭಕ್ತಿ ಗೀತೆಗಳನ್ನು ಪ್ರಸಾರ ಮಾಡಲಾಗುವುದು.

ಕಳೆದ ಹಲವಾರು ವರ್ಷಗಳಿಂದ ದೇವಸ್ಥಾನ ತೆರೆಯುವಾಗ ಮತ್ತು ಮುಚ್ಚುವಾಗ ಖ್ಯಾತ ಗಾಯಕರಾದ ಕೆ.ಜೆ. ಯೇಸುದಾಸ್ ಮತ್ತು ಜಯನ್-ವಿಜಯನ್ ಜೋಡಿ  ಹಾಡಿದ ಹಾಡು ಹಾಕಲಾಗುತ್ತಿತ್ತು.

ಈಗ ಸಿರ್‌ಕಾಳಿ ಗೋವಿಂದರಾಜನ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ವೀರಮನ್-ಕಣ್ಣನ್ ಮತ್ತು ನಾರಾಯಣ ರೆಡ್ಡಿ ಅವರು ಹಾಡಿರುವ ವಿವಿಧ ಭಾಷೆಗಳ ಹಾಡಿನ ನೂತನ ಸಿ.ಡಿ.ಯನ್ನು ಸಿದ್ದಗೊಳಿಸಲಾಗಿದೆ. ಪ್ರತಿವರ್ಷ ನವೆಂಬರ್-ಜನವರಿ ಅವಧಿಯಲ್ಲಿ 30 ದಶಲಕ್ಷಕ್ಕೂ ಹೆಚ್ಚುಮಂದಿ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಇವರಲ್ಲಿ ಹೆಚ್ಚು ಮಂದಿ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದವರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.