ADVERTISEMENT

ಶಬರಿಮಲೆಯಲ್ಲಿ ಭಕ್ತರ, ಸರ್ಪಗಳ, ಕಿಸೆಗಳ್ಳರ ಸಂಖ್ಯೆಯಲ್ಲಿ ಹೆಚ್ಚಳ!

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 6:00 IST
Last Updated 9 ಜನವರಿ 2012, 6:00 IST

 ಶಬರಿಮಲೆ (ಐಎಎನ್ಎಸ್): ಕಳೆದ ವರ್ಷ ಇದೇ ಸಮಯದಲ್ಲಿ ಕೇರಳದ ಮಧ್ಯಭಾಗದಲ್ಲಿನ ಪಶ್ಚಿಮ ಘಟ್ಟದಲ್ಲಿರುವ ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿ ಉಂಟಾದ ನೂಕುನುಗ್ಗಲಲ್ಲಿ 102 ಮಂದಿ ಭಕ್ತರು ಅಸುನೀಗಿದ್ದರು. ಆದರೂ ಅದು ಅಲ್ಲಿಗೆ ಪ್ರತಿ ವರ್ಷ ಬರುವ ಯಾತ್ರರ್ಥಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ!

ಈ ವರ್ಷದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ದೇವಸ್ಥಾನದ ಆದಾಯದಲ್ಲೂ ಹೆಚ್ಚಳ ಉಂಟಾಗಿದೆ. ಅಷ್ಟೇ ಅಲ್ಲ, ಪ್ರಸ್ತಕ ಸಾಲಿನ ಉತ್ಸವದ ಸಂದರ್ಭದಲ್ಲಿ ಪ್ರತಿಯೊಂದು ವಿಷಯದಲ್ಲೂ ಹೆಚ್ಚಳ ಕಂಡುಬರುತ್ತಿದೆ. ಹಾವುಗಳಿಂದ ಹಿಡಿದು ಜೇಬುಗಳ್ಳರವರೆಗೆ ಹೆಚ್ಚಳ ಉಂಟಾಗಿದೆ!

ಈ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ತ್ರಾವಣಕೋರ್ ದೇವಸ್ಥಾನ ಮಂಡಳಿಯು, ~ಭಕ್ತರಿಂದ ಪಡೆದ ಹರಕೆ ಕಾಣಿಕೆ ಮತ್ತು ಪ್ರಸಾದದ ಮಾರಾಟದಿಂದ ಕಳೆದ ಒಂದು ವಾರದ ದೇವಸ್ಥಾನದ ಆದಾಯ 130 ಕೋಟಿ ರೂಪಾಯಿ ದಾಟಿದೆ, ಕಳೆದ ವರ್ಷ, ಇದೇ ಅವಧಿಯ ದೇವಸ್ಥಾನದ ಆದಾಯ 115 ಕೋಟಿ ರೂಪಾಯಿ ಇತ್ತು~ ಎಂದು ಹೇಳಿಕೊಂಡಿದೆ.

ADVERTISEMENT

ಒಂದು ಕಡೆ ಭಕ್ತರ ಮತ್ತು ದೇವಸ್ಥಾನದ ಆದಾಯ ಹೆಚ್ಚಿದ್ದರೆ, ಇನ್ನೊಂದು ಕಡೆ ಈ ಬಾರಿ ಇದುವರೆಗೆ ದೇವಸ್ಥಾನದ ಪರಿಸರದಲ್ಲಿ 120 ಹಾವುಗಳು ಪತ್ತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 90 ಹಾವುಗಳು ಕಾಣಿಸಿಕೊಂಡಿದ್ದವು. ವಾರ್ಷಿಕ ಉತ್ಸವಕ್ಕಾಗಿ ದೇವಸ್ಥಾನದ ಸುತ್ತಲಿನ ಪರಿಸರ ಸ್ವಚ್ಛಗೊಳಿಸಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಶಬರಿಮಲೆ ದೇವಸ್ಥಾನದ ಪರಿಸರದಲ್ಲಿ ಕಾಣಿಸಿಕೊಳ್ಳುವ ಹಾವುಗಳನ್ನು ಹಿಡಿದು ನಂತರ ಸಮೀಪದ ದಟ್ಟ ಕಾಡಿನಲ್ಲಿ ಬಿಟ್ಟುಬರಲಾಗುತ್ತದೆ. ಅದಕ್ಕಾಗಿಯೇ ದೇವಸ್ಥಾನದ ಆಡಳಿತ ಮಂಡಳಿಯು ಒಬ್ಬ ಹಾವು ಹಿಡಿಯುವವನ್ನು ನೇಮಕ ಮಾಡಲಾಗಿದೆ.

ಭಕ್ತರ ದಂಡು ಹೆಚ್ಚಿರುವುದನ್ನು ಕಂಡು ಇಲ್ಲಿಗೆ ಧಾವಿಸಿ ಬಂದಿರುವ ಜೇಬುಗಳ್ಳರು, ಭಕ್ತರ ಅರಿಗೆ ಬಾರದಂತೆ ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ. ಭಕ್ತರ ವೇಷದಲ್ಲಿ ನೂಕುನುಗ್ಗಲಲ್ಲಿ  ಸಾಲಿನಲ್ಲಿ ಸೇರಿ ಭಕ್ತರ ಜೇಬುಗಳಿಗೆ, ಗಂಟುಗಳಿಗೆ ಕತ್ತರಿ ಹಾಕುವ ಈ ಕಳ್ಳರು, ಭಕ್ತರ ಅರಿವಿಗೆ ಬರದಂತೆಯೇ ಅವರಲ್ಲಿನ ಹಣ ಮತ್ತು ನಗನಾಣ್ಯಗಳನ್ನು ದೋಚುತ್ತಿದ್ದಾರೆ!

ಇದೇ ಮಕರ ಸಂಕ್ರಾಂತಿ ದಿನ ಜನವರಿ 15 ರಂದು ವಾರ್ಷಿಕ ಉತ್ಸವ ಅಂತಿಮ ಘಟ್ಟ ತಲುಪುವಾಗ ಶಬರಿಮಲೆಯಲ್ಲಿ ಅಗಣಿತ ಸಂಖ್ಯೆಯ ಭಕ್ತರ ದಂಡು ನೆರೆದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.