ADVERTISEMENT

ಶಾಸಕ ಜಿಗ್ನೇಶ್‌ ಮೆವಾನಿಗೆ ಪೊಲೀಸ್‌ ನಿರ್ಬಂಧ

ಪಿಟಿಐ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಜಿಗ್ನೇಶ್‌ ಮೆವಾನಿ
ಜಿಗ್ನೇಶ್‌ ಮೆವಾನಿ   

ಜೈಪುರ: ನಾಗೌರ್‌ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಶಾಸಕ, ದಲಿತ ಮುಖಂಡ ಜಿಗ್ನೇಶ್‌ ಮೆವಾನಿ ಅವರನ್ನು ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ತಡೆಯಲಾಯಿತು. ಜಿಲ್ಲಾಡಳಿತದ ಆದೇಶದ ಪ್ರಕಾರ ಅವರನ್ನು ತಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿಮಾನನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ನನ್ನನ್ನು ತಡೆದ ಪೊಲೀಸರು, ನಾಗೌರ್‌ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಪತ್ರ ನೀಡಿದರು. ರ‍್ಯಾಲಿಯಲ್ಲಿ ಭಾರತೀಯ ಸಂವಿಧಾನ ಹಾಗೂ ಅಂಬೇಡ್ಕರ್‌ ಕುರಿತು ಮಾತನಾಡಲು ಬಯಸಿದ್ದೆ’ ಎಂದು ಮೆವಾನಿ ಟ್ವೀಟ್‌ ಮಾಡಿದ್ದಾರೆ.

‘ನೀವು ಜೈಪುರದಲ್ಲೂ ತಿರುಗಾಡುವಂತಿಲ್ಲ. ಅಹಮದಾಬಾದ್‌ಗೆ ವಾಪಸ್‌ ಮರಳಿ ಎಂದು ಪೊಲೀಸರು ಹೇಳಿದರು. ಕನಿಷ್ಠ ಪತ್ರಿಕಾಗೋಷ್ಠಿ ನಡೆಸಲೂ ಅವಕಾಶ ನೀಡಲಿಲ್ಲ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

‘ಭಾರತ್‌ ಬಂದ್‌ ವೇಳೆ ಹಿಂಸಾಚಾರ ಸಂಭವಿಸಿದ್ದರಿಂದ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಆದಕಾರಣ ಮೆವಾನಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ’ ಎಂದು ಜೈಪುರದ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.