ADVERTISEMENT

ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2016, 19:30 IST
Last Updated 29 ಡಿಸೆಂಬರ್ 2016, 19:30 IST
ಶಿಕ್ಷಣ
ಶಿಕ್ಷಣ   

ಜನವರಿ 13
ಕೇರಳದ ಹೆಗ್ಗಳಿಕೆ

ಶೇ 100ರಷ್ಟು ಪ್ರಾಥಮಿಕ ಶಿಕ್ಷಣದ ಗುರಿಯನ್ನು ತಲುಪಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಯಿತು. ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು ಈ ಘೋಷಣೆ ಮಾಡಿದರು.

ಏಪ್ರಿಲ್‌ 11
ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಎನ್‌ಇಇಟಿ

ವೈದ್ಯಕೀಯ (ಎಂಬಿಬಿಎಸ್‌) ಮತ್ತು ದಂತ ವೈದ್ಯಕೀಯ (ಬಿಡಿಎಸ್‌) ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರದಾದ್ಯಂತ ಏಕರೂಪದ ಸಾಮಾನ್ಯ ಪರೀಕ್ಷೆ ವ್ಯವಸ್ಥೆಯನ್ನು ರದ್ದು ಪಡಿಸಿ 2013ರಲ್ಲಿ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ವಾಪಸ್‌ ಪಡೆಯಿತು. ಇದರಿಂದಾಗಿ ವೈದ್ಯಕೀಯ ಕೋರ್ಸ್‌ ಪ್ರವೇಶಾತಿಗಾಗಿ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ನಡೆಸುವ ಪ್ರಕ್ರಿಯೆಗೆ ಚಾಲನೆ ದೊರೆಯಿತು.

ಏಪ್ರಿಲ್‌ 20
ಶಾಲಾ ಮಕ್ಕಳ ಚೀಲದ ಹೊರೆ ಕಡಿತ

ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳ ಚೀಲದ ಹೊರೆಯನ್ನು ಕಡಿಮೆಗೊಳಿಸಲು  ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮುಂದಾಯಿತು. ತರಗತಿ ವೇಳಾಪಟ್ಟಿಯ ಪ್ರಕಾರ ನಿರ್ದಿಷ್ಟ ಪಠ್ಯಪುಸ್ತಕಗಳನ್ನು ಮಾತ್ರ ಮಕ್ಕಳು ಶಾಲೆಗೆ ತರುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಶಾಲೆಗಳಿಗೆ ಸೂಚಿಸಿತು.

ಏಪ್ರಿಲ್‌ 28
ಎನ್‌ಇಇಟಿಗೆ ಸಿದ್ಧ

ಎನ್‌ಇಇಟಿ ನಡೆಸಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತು. ಎರಡು ದಿನಗಳ ಒಳಗಾಗಿ ಪರೀಕ್ಷಾ ವೇಳಾ ಪಟ್ಟಿ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್‌ ಸರ್ಕಾರಕ್ಕೆ ಸೂಚಿಸಿತು.

ಏಪ್ರಿಲ್‌ 29
ಎರಡು ಹಂತಗಳಲ್ಲಿ ಪರೀಕ್ಷೆ

2016–17ರ ಶೈಕ್ಷಣಿಕ ವರ್ಷಕ್ಕಾಗಿ ರಾಜ್ಯಗಳಿಗೆ ಮತ್ತು ಖಾಸಗಿ ಕಾಲೇಜುಗಳು ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡುವುದಕ್ಕೆ ಈಗ ನೀಡಿರುವ ಆದೇಶವನ್ನು ಮಾರ್ಪಾಟು ಮಾಡುವಂತೆ ಕೇಂದ್ರ ಸುಪ್ರೀಂ ಕೋರ್ಟ್‌ಗೆ ಮತ್ತೆ ಮನವಿ ಸಲ್ಲಿಸಿತು. ಆದರೆ, ನ್ಯಾಯಪೀಠ ಅದನ್ನು ತಿರಸ್ಕರಿಸಿತು. ಮೇ 1 ಮತ್ತು ಜುಲೈ 24ರಂದು ಎರಡು ಹಂತಗಳಲ್ಲಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ಎನ್‌ಇಇಟಿ ನಡೆಸಿತು.

ಮೇ  25
ಸುಗ್ರೀವಾಜ್ಞೆಗೆ ಸಹಿ

ಎನ್‌ಇಇಟಿಯಿಂದ ರಾಜ್ಯಗಳಿಗೆ ವಿನಾಯಿತಿ ನೀಡುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸಹಿ ಹಾಕಿದರು. ಈ ಸುಗ್ರೀವಾಜ್ಞೆ ಬಗ್ಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

ಜೂನ್‌  14
ಐಐಎಸ್‌ಸಿ ದೇಶದ ಅತ್ಯುತ್ತಮ ವಿದ್ಯಾಸಂಸ್ಥೆ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಭಾರತದ ಅತ್ಯುತ್ತಮ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಏಷ್ಯಾದ ಅತ್ಯುತ್ತಮ 50 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಅದು 33ನೇ ಸ್ಥಾನ ಪಡೆದಿತ್ತು.

ಜುಲೈ 27
ರ‍್ಯಾಂಕಿಂಗ್‌ ಹಗರಣ

ತೆಲಂಗಾಣದಲ್ಲಿ ವೃತ್ತಿ ಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯ ರ‍್ಯಾಂಕಿಂಗ್‌ನಲ್ಲಿ ನಡೆದ ಹಗರಣ ಬಯಲಾಯಿತು.ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿನಿಯೊಬ್ಬರ ಪೋಷಕರ ದೂರಿನ ಆಧಾರದಲ್ಲಿ ಸಿಐಡಿ ತಂಡ ತನಿಖೆ ನಡೆಸಿದಾಗ ಹಗರಣ ಬೆಳಕಿಗೆ ಬಂತು.

ಅಕ್ಟೋಬರ್‌ 25
ಪಾಸ್‌–ಫೇಲ್‌

ಪಾಸ್‌– ಫೇಲ್‌ ನಿರ್ಧಾರ ರಾಜ್ಯಗಳ ವಿವೇಚನೆಗೆ ಐದು ಮತ್ತು ಎಂಟನೇ ತರಗತಿಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಬೇಕೇ ಎಂಬ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತು. ಈ ಎರಡು ತರಗತಿಗಳಲ್ಲಿ ‘ಪಾಸ್‌–ಫೇಲ್‌’ ವ್ಯವಸ್ಥೆ ಜಾರಿಗೆ ತರಲು ಸಾಧ್ಯವಾಗುವಂತೆ ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತರಲು ಮಾನವ ಸಂಪನ್ಮೂಲ ಸಚಿವಾಲಯ ಒಪ್ಪಿಗೆ ನೀಡಿತು.

ಡಿಸೆಂಬರ್‌ 14
ರಾಯಚೂರಿಗೆ ಐಐಐಟಿ

ರಾಯಚೂರಿನಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ  ಐಐಐಟಿ ತಲೆ ಎತ್ತಲಿದೆ.

ಡಿಸೆಂಬರ್‌ 21
ಪಬ್ಲಿಕ್‌ ಪರೀಕ್ಷೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಸಿ) ಹತ್ತನೇ ತರಗತಿಗೆ ಮತ್ತೆ ಪಬ್ಲಿಕ್‌ ಪರೀಕ್ಷೆ ಪದ್ಧತಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿತು. 2018ರಿಂದ ಪಬ್ಲಿಕ್‌ ಪರೀಕ್ಷೆ ಕಡ್ಡಾಯಗೊಳಿಸಿರುವುದನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಘೋಷಿಸಿದರು.

ನಾಲ್ಕು ಐಐಟಿಗಳು
ಕರ್ನಾಟದ ಧಾರವಾಡ, ಜಮ್ಮು, ಛತ್ತೀಸಗಡ ಬಿಲಾಯಿ ಮತ್ತು ಗೋವಾಗಳಲ್ಲಿ ಹೊಸದಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಆರಂಭವಾದವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.