ADVERTISEMENT

ಶಿವಾನಿ ಪ್ರಕರಣ: ಶರ್ಮಾಗೆ ಸುಪ್ರೀಂ ಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 8:15 IST
Last Updated 13 ಫೆಬ್ರುವರಿ 2012, 8:15 IST

ನವದೆಹಲಿ, (ಪಿಟಿಐ): ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್  ತೀರ್ಮಾನದಿಂದ ಆರೋಪಮುಕ್ತರಾಗಿದ್ದ ವಜಾಗೊಂಡ ಐಪಿಎಸ್ ಅಧಿಕಾರಿ ಆರ್.ಕೆ. ಶರ್ಮಾ, ಇತರೆ ಇಬ್ಬರು ಆರೋಪಿಗಳಿಗೆ  ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕರಲ್ಲಿ ತೀವ್ರ ಆಸಕ್ತಿ ಮೂಡಿಸಿದ್ದ 1999ರ ಶಿವಾನಿ ಕೊಲೆ ಪ್ರಕರಣದ ಆರೋಪಿಗಳನ್ನು ಆರೋಪಮುಕ್ತರನ್ನಾಗಿಸಿದ್ದ ದೆಹಲಿ ಹೈಕೋರ್ಟ್ ತೀರ್ಮಾನವನ್ನು ಪ್ರಶ್ನಿಸಿ, ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಸೋಮವಾರ  ಆರ್. ಕೆ. ಶರ್ಮಾ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.

ನ್ಯಾಯಾಮೂರ್ತಿಗಳಾದ ಅಫ್ತಾಬ್ ಅಲಂ ಮತ್ತು ರಂಜನಾ ಪ್ರಕಾಶ್ ದೇಸಾಯಿ ಅವರನ್ನೊಳಗೊಂಡ ಪೀಠವು ಆರ್. ಕೆ.ಶರ್ಮಾ ಸೇರಿದಂತೆ ಭಗವಾನ್ ಮತ್ತು ಸತ್ಯ ಪ್ರಕಾಶ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಐಪಿಎಸ್ ಅಧಿಕಾರಿ ರವಿಕಾಂತ್ ಶರ್ಮಾ ಮತ್ತು ಇತರರನ್ನು ಆರೋಪಮುಕ್ತರನ್ನಾಗಿ ಮಾಡಿದ ದೆಹಲಿ ಹೈಕೋರ್ಟಿನ ತೀರ್ಮಾನವನ್ನು ಪ್ರಶ್ನಿಸಿ ದೆಹಲಿ ಪೊಲೀಸರು  ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಏರಿದ್ದರು.
 
ಶಿವಾನಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನೀಡಿದ ದೆಹಲಿ ಹೈಕೋರ್ಟ್ ಸಂಶಯದ ಲಾಭದ ಮೇಲೆ ಅಕ್ಟೋಬರ್ 12, 2011ರಂದು ರವಿಕಾಂತ್ ಶರ್ಮಾ ಮತ್ತು ಇತರ ಇಬ್ಬರನ್ನು ಆರೋಪದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿತ್ತು.ಇನ್ನೊಬ್ಬ ಆರೋಪಿ ಪ್ರದೀಪ್ ಶರ್ಮಾ ಅವರಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT