ಹೆಡ್ಲಿಗೆ ಅಭಿನಂದನೆ ಸಲ್ಲಿಸಿದ್ದ ಪತ್ನಿ
ನವದೆಹಲಿ (ಪಿಟಿಐ): ಮುಂಬೈ ಮೇಲಿನ ದಾಳಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಸಂಚುಕೋರರಲ್ಲಿ ಒಬ್ಬನಾದ ಪಾಕ್ ಮೂಲದ ಅಮೆರಿಕ ಪ್ರಜೆ ಡೇವಿಡ್ ಹೆಡ್ಲಿಗೆ ಆತನ ಪತ್ನಿ ಅಭಿನಂದನೆ ಸಲ್ಲಿಸಿದ್ದಳು. ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇಲ್ಲಿನ ನ್ಯಾಯಾಲಯಕ್ಕೆ ಶನಿವಾರ ಈ ವಿಷಯವನ್ನು ತಿಳಿಸಿದೆ.
`ನಾನು ಇಡೀ ದಿನ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿ ಹಾಗೂ ನಂತರ ಬೆಳವಣಿಗೆಯನ್ನು ಟೀವಿಯಲ್ಲಿ ವೀಕ್ಷಿಸಿದ್ದೇನೆ~ ಎಂದು ಆಕೆ ತಿಳಿಸಿದ್ದಾಳೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಬಾನೋಟ್, ಜಯಚಂದ್ರನ್ಗೆ ಜಾಮೀನು
ನವದೆಹಲಿ (ಐಎಎನ್ಎಸ್): ಕಾಮನ್ವೆಲ್ತ್ ಕ್ರೀಡಾಕೂಟಗಳ (ಸಿಡಬ್ಲ್ಯುಜಿ) ಸಂಘಟನಾ ಸಮಿತಿಯ ಮಹಾ ಕಾರ್ಯದರ್ಶಿ ಲಲಿತ್ ಬಾನೋಟ್ ಮತ್ತು ಮಾಜಿ ಖಜಾಂಚಿ ಎಂ. ಜಯಚಂದ್ರನ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ಇಲ್ಲಿ ಜಾಮೀನು ಮಂಜೂರು ಮಾಡಿದೆ.
ಸಂಘಟನಾ ಸಮಿತಿಯ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಎರಡು ದಿನಗಳ ತರುವಾಯ ಈ ಇಬ್ಬರಿಗೂ ಸಿಬಿಐ ವಿಶೇಷ ನ್ಯಾಯಾಧೀಶ ತಲ್ವಂತ್ ಸಿಂಗ್ ಜಾಮೀನು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.