ಭೋಪಾಲ್ (ಪಿಟಿಐ): `ಭೋಪಾಲ್ ಅನಿಲ ದುರಂತ ಸಂಭವಿಸಿ 28ವರ್ಷಗಳು ಕಳೆದರೂ ಸಂತ್ರಸ್ತರಿಗೆ ಸಮರ್ಪಕವಾದ ಪರಿಹಾರ ದೊರೆತಿಲ್ಲ' ಎಂದು ಸಂತ್ರಸ್ತರ ಪರವಾಗಿ ಕೆಲಸ ಮಾಡುತ್ತಿರುವ ವಿವಿಧ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಅನಿಲ ದುರಂತ ಸಂಭವಿಸಿ 28 ವರ್ಷಗಳು ಸಂದ ಹಿನ್ನೆಲೆಯಲ್ಲಿ ಸಂತ್ರಸ್ತರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳು ಸೋಮವಾರ ಇಲ್ಲಿ ಜಾಥಾ ನಡೆಸಿದವು. ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರೆಕಿಸಿಕೊಡುವಂತೆ ಆಗ್ರಹಿಸಿದವು.
`ಇಷ್ಟು ವರ್ಷಗಳು ಕಳೆದರೂ ಯಾರೊಬ್ಬರನ್ನು ಶಿಕ್ಷಿಸದಿರುವುದು ದೌರ್ಭಾಗ್ಯ. ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ದೊರೆತಿಲ್ಲ' ಎಂದು `ಭೋಪಾಲ್ ಅನಿಲ ದುರಂತ ಪೀಡಿತ ಮಹಿಳಾ ಉದ್ಯೋಗ ಸಂಘಟನೆ'ಯ ಸಂಚಾಲಕರಾದ ಅಬ್ದುಲ್ ಜಬ್ಬಾರ್ ಆರೋಪಿಸಿದ್ದಾರೆ.
ಕೇಂದ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳು ಸಂತ್ರಸ್ತರ ಪರವಾಗಿ ಕೆಲಸ ಮಾಡುವುದನ್ನು ಬಿಟ್ಟು ಬಹುರಾಷ್ಟ್ರೀಯ ಕಂಪೆನಿಗಳ ರಕ್ಷಣೆಯಲ್ಲಿ ತೊಡಗಿವೆ. ಯೂನಿಯನ್ ಕಾರ್ಬೈಡ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾರ್ನ್ ಆ್ಯಂಡರ್ಸನ್ ಭಾರತದಲ್ಲಿ ಯಾವುದೇ ವಿಚಾರಣೆ ಎದುರಿಸದಿರುವುದೇ ಇದಕ್ಕೆ ನಿದರ್ಶನ ಎಂದು ಅವರು ದೂರಿದರು.
ನಂತರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿವಾಸಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.