ADVERTISEMENT

ಸಂಸತ್ತಿನಲ್ಲಿ ನಿಲ್ಲದ ಗದ್ದಲ: ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 11:42 IST
Last Updated 9 ಡಿಸೆಂಬರ್ 2013, 11:42 IST

ನವದೆಹಲಿ (ಪಿಟಿಐ): 2ಜಿ ಹಗರಣದ ಬಗೆಗಿನ ಜೆಪಿಸಿ (ಜಂಟಿ ಸಂಸದೀಯ ಸಮಿತಿ) ವರದಿ, ಬೆಲೆ ಏರಿಕೆ, ತೆಲಂಗಾಣ ಹಾಗೂ ಮುಜಫ್ಫರ್ ನಗರದ ಪರಿಹಾರ ಶಿಬಿರಗಳಲ್ಲಿ ನಡೆದ ಮಗುವಿನ ಸಾವು ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸಂಸದರು ನಡೆಸಿದ ಪ್ರತಿಭಟನೆ ಸಂಸತ್ತಿನ ಉಭಯ ಸದನಗಳ ಕಲಾಪಗಳು ಪದೇ ಪದೇ ಮುಂದೂಡಿಕೆಗೆ ಕಾರಣವಾಯಿತು.

ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳು ಸೋಮವಾರ ಆರಂಭವಾಗುತಿದ್ದಂತೆಯೇ, ವಿವಿಧ ಬೇಡಿಕೆಗಳೊಂದಿಗೆ ಟಿಡಿಪಿ, ಎಡ ಹಾಗೂ ಬಿಎಸ್‌ಪಿ ಪಕ್ಷಗಳ ಸದಸ್ಯರು ಸದನದ ಬಾವಿಗೆ ನುಗ್ಗಿದರು.

ಗದ್ದಲದ ನಡುವೆಯೇ ಉಭಯ ಸದನಗಳ ಕಲಾಪಗಳನ್ನು ಮೊದಲು ಮಧ್ಯಾಹ್ನದವರೆಗೆ ಮುಂದೂಡಲಾಯಿತು.

ADVERTISEMENT

ಲೋಕಸಭೆಯಲ್ಲಿ ಆಂಧ್ರಪ್ರದೇಶ ವಿಭಜನೆಗೆ ವಿರೋಧ ವ್ಯಕ್ತಪಡಿಸಿದ ಟಿಡಿಪಿ ಸದಸ್ಯರು, ಸದನದ ಬಾವಿಗಳಿದು ‘ಆಂಧ್ರಪ್ರದೇಶ ಉಳಿಸಿ’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಉತ್ತರಪ್ರದೇಶ ರಾಜ್ಯದ ಮುಜಫ್ಪರನಗರದ ಪರಿಹಾರ ಶಿಬಿರಗಳಲ್ಲಿರುವ ಗಲಭೆಯ ಸಂತ್ರಸ್ತರ ಮೇಲಿನ ಶೋಷಣೆಗೆ ಸಂಬಂಧಿಸಿದ ಪತ್ರಿಕಾ ವರದಿಗಳ ಪ್ರತಿಗಳನ್ನು ಬಿಎಸ್‌ಪಿ ಸದಸ್ಯರು ಗದ್ದಲ ನಡೆಸಿದರು.

ರಾಜ್ಯಸಭೆಯಲ್ಲೂ ಇದೇ ಪರಿಸ್ಥಿತಿ. ಪತ್ರಿಕಾ ವರದಿಗಳೊಂದಿಗೆ ಸದನ ಬಾವಿಗಿಳಿದ ಬಿಎಸ್‌ಪಿ ಸದಸ್ಯರು, ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.