ನವದೆಹಲಿ (ಪಿಟಿಐ): ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮತ್ತು ಮಹಾಲೇಖಪಾಲರ (ಸಿಎಜಿ) ಅಧಿಕಾರ ಸಚಿವರುಗಳಿಂದ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂಬುದನ್ನು ಖಚಿತಪಡಿಸಬೇಕು ಎಂದು ಪಿಎಸಿ ಅಧ್ಯಕ್ಷ ಮುರಳಿ ಮನೋಹರ ಜೋಷಿ ಅವರು ಲೋಕಸಭಾ ಸಭಾಧ್ಯಕ್ಷರಾದ ಮೀರಾಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಿಎಜಿ ವರದಿ ಬಗ್ಗೆ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಈಚೆಗೆ ಹೇಳಿಕೆ ನೀಡಿದ್ದನ್ನು ಪ್ರಸ್ತಾಪಿಸಿರುವ ಅವರು, ಸಿಎಜಿ ವರದಿ ಬಗ್ಗೆ ಪ್ರತಿಕ್ರಿಯಿಸಲು ದೂರಸಂಪರ್ಕ ಸಚಿವಾಲಯಕ್ಕೆ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಈಗಾಗಲೇ ಸಂಸತ್ತಿನಲ್ಲಿ ವರದಿಯನ್ನು ಮಂಡಿಸಲಾಗಿದ್ದರೂ ಈಗ ಅದರ ವಿರುದ್ಧ ದಾಳಿ ನಡೆಸುತ್ತಿರುವುದನ್ನು ಪ್ರಶ್ನಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾರ್ಗದರ್ಶನ ನೀಡಲು ಸಭಾಧ್ಯಕ್ಷರಿಗೆ ಅಧಿಕಾರ ಇರುವುದರಿಂದ ಈ ರೀತಿಯ ಕ್ರಮಗಳು ಮರುಕಳಿಸುವುದಿಲ್ಲ ಎಂಬುದನ್ನು ಅವರು ಖಚಿತ ಪಡಿಸಬೇಕು ಎಂದಿದ್ದಾರೆ.
ಪ್ರಜಾಪ್ರಭುತ್ವದ ಆರೋಗ್ಯದ ಮೇಲೆ ಇಂತಹ ಹೇಳಿಕೆಗಳು ಗಂಭೀರ ಪರಿಣಾಮ ಬೀರುತ್ತವೆ ಎಂದಿರುವ ಅವರು ಸಿಬಲ್ ಅವರ ಹೇಳಿಕೆಗೆ ಪ್ರಧಾನಮಂತ್ರಿ ಅವರ ಅನುಮತಿ ಮತ್ತು ಒಪ್ಪಿಗೆ ಇತ್ತೇ ಎಂದು ಕೇಳಿದ್ದಾರೆ.
‘ಸಿಬಲ್ ಅವರ ಹೇಳಿಕೆ ಸೂಕ್ತವಾದುದ್ದಲ್ಲ. ಇದು ಪಿಎಸಿ ಮತ್ತು ಸಿಎಜಿಯ ಘನತೆ ಮೇಲೆ ನಡೆದಿರುವ ದಾಳಿ ಎಂದು ಸಮಿತಿ ಭಾವಿಸಿದೆ’ ಎಂದು ಈ ತಿಂಗಳ 12ರಂದು ಪಿಎಸಿಯ ಕಡೆಯ ಸಭೆ ನಡೆಸಿದ್ದ ಜೋಷಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.