ನವದೆಹಲಿ(ಪಿಟಿಐ): ಆಂಧ್ರಪ್ರದೇಶ ವಿಭಜನೆ ವಿಷಯ ಚರ್ಚಿಸಲು ಅವಕಾಶ ನೀಡದ ಕಾರಣಕ್ಕೆ ಇಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯ ಮಂಡಳಿ (ಎನ್ಐಸಿ) ಸಭೆಯಿಂದ ಆಂಧ್ರ ಪ್ರದೇಶ ಮಾಜಿ ಮುಖ್ಯ ಮಂತ್ರಿ ಹಾಗೂ ಟಿಡಿಪಿ ಮುಖಂಡ ಎನ್. ಚಂದ್ರಬಾಬು ನಾಯ್ಡು ಹೊರ ನಡೆದ ಘಟನೆ ಸೋಮವಾರ ನಡೆಯಿತು.
ಹೆಚ್ಚುತ್ತಿರುವ ಕೋಮು ಹಿಂಸಾಚಾರ, ಮಹಿಳೆಯರ ಮೇಲಿನ ದಾಳಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗ ಡದ ಮೇಲಿನ ದೌರ್ಜನ್ಯ ಮುಂತಾದ ವಿಷಯಗಳ ಕುರಿತು ಮಂಡಳಿ ಸಭೆ ಯಲ್ಲಿ ಚರ್ಚೆ ನಡೆಯಬೇಕಿತ್ತು. ಈ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡು ತೆಲಂಗಾಣ ವಿವಾದ ಹಾಗೂ ಇದರಿಂದಾಗಿ ಸೀಮಾಂಧ್ರ ಭಾಗದಲ್ಲಿ ನಡೆ ಯುತ್ತಿರುವ ಪ್ರತಿಭಟನೆಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಮುಂದಾದರು.
ನಾಯ್ಡು ವಿಷಯ ಪ್ರಸ್ತಾಪಿಸುತ್ತಿದ್ದಂತೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ತೆಲಂಗಾಣ ವಿವಾದ ಚರ್ಚಿಸಲು ಇದು ವೇದಿಕೆ ಅಲ್ಲ ಎಂದರು. ಇದಕ್ಕೆ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಧನಿಗೂಡಿಸಿ ಆಂಧ್ರ ವಿಭಜನೆ ಬಗ್ಗೆ ಮಾತನಾಡದಂತೆ ನಾಯ್ಡು ಅವರನ್ನು ತಡೆದರು.
ಎನ್ಐಸಿ ಸಭೆಯಲ್ಲಿ ತೆಲಂಗಾಣ ವಿವಾದದ ಬಗ್ಗೆ ಮಾತನಾಡದಂತೆ ಒಂದು ವೇಳೆ ಮಾತನಾಡಲು ಬಯಸಿದರೆ ಸಭೆಯಿಂದ ಹೊರನಡೆಯ ಬೇಕಾಗುತ್ತದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿರುವುದಾಗಿ ನಾಯ್ಡು ತಿಳಿಸಿದರು.
’ದೇಶದ ಪ್ರಮುಖ ನಾಯಕರು ಉಪಸ್ಥಿತರಿರುವ ವೇದಿಕೆಯಲ್ಲೇ ತೆಲಂಗಾಣದಂತಹ ವಿವಾದದ ಬಗ್ಗೆ ಮಾತನಾಡಲು ಅವಕಾಶ ನೀಡದಿದ್ದರೆ ಮತ್ತೆಲ್ಲಿ ಹೋಗಬೇಕು’ ಎಂದು ನಾಯ್ಡು ಹೇಳಿದರು.
ಸೀಮಾಂಧ್ರ ಭಾಗದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ಇಡೀ ಪ್ರಾಂತ್ಯವೇ ತೊಂದರೆಯಲ್ಲಿದೆ ಎಂದು ನಾಯ್ಡು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.