ADVERTISEMENT

ಸಯೀದ್ ವಿರುದ್ಧ ಕ್ರಮ: ಜರ್ದಾರಿ ಮೇಲೆ ಸಿಂಗ್ ಒತ್ತಡ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 10:15 IST
Last Updated 8 ಏಪ್ರಿಲ್ 2012, 10:15 IST

ನವದೆಹಲಿ (ಪಿಟಿಐ): ಮುಂಬೈ ದಾಳಿಗೆ ಪ್ರಚೋದಿಸಿದ ಹಫೀಜ್ ಸಯೀದ್ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದ್ದು, ದ್ವಿಪಕ್ಷೀಯ ಬಾಂಧವ್ಯದ ಪ್ರಗತಿ ನಿರ್ಣಯದಲ್ಲಿ ಇದೇ ಪ್ರಮುಖ ಅಂಶವಾಗುತ್ತದೆ ಎಂಬುದಾಗಿ ಪಾಕ್ ಪ್ರಧಾನಿ ಅಸಿಫ್ ಅಲಿ ಜರ್ದಾರಿ ಅವರಿಗೆ ಹೇಳುವ ಮೂಲಕ ಪ್ರಧಾನಿ ಮನಮೋಹನ ಸಿಂಗ್ ಅವರು ಭಾನುವಾರ ಪಾಕಿಸ್ತಾನದ ಮೇಲೆ ಭಯೋತ್ಪಾದನೆ ವಿಚಾರದಲ್ಲಿ ಒತ್ತಡ ಬೀರಿದರು.

ಪ್ರಧಾನಿಯವರ ರೇಸ್ ಕೋರ್ಸ್ ರಸ್ತೆ ನಿವಾಸದಲ್ಲಿ ಜರ್ದಾರಿ ಜೊತೆಗೆ ಸಿಂಗ್ ಅವರು ನಡೆಸಿದ 40 ನಿಮಿಷಗಳ ನೇರ ಮಾತುಕತೆಯಲ್ಲಿ ಭಯೋತ್ಪಾದನೆ ವಿಚಾರವೇ ಪ್ರಮುಖವಾಗಿ ಪ್ರಸ್ತಾಪಗೊಂಡಿತು ಎಂದು ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಹೇಳಿದರು.


~ನಾಯಕರು ಪ್ರಮುಖ ವಿಷಯವಾದ ಭಯೋತ್ಪಾದನೆ ಸಮಸ್ಯೆ ಬಗ್ಗೆ ಚರ್ಚಿಸಿದರು. ದ್ವಿಪಕ್ಷೀಯ ಬಾಂಧವ್ಯಗಳ ಪ್ರಗತಿಯನ್ನು ಭಯೋತ್ಪಾದನೆ ಸಮಸ್ಯೆಯ ಹಿನ್ನೆಲೆಯಲ್ಲೇ ಭಾರತೀಯ ಜನ ನಿರ್ಧರಿಸುವರು ಎಂಬುದಾಗಿ ಪ್ರಧಾನಿ ಹೇಳಿದರು ಎಂದು ಮಥಾಯ್ ನುಡಿದರು.

ಮುಂಬೈ ದಾಳಿಯ ರೂವಾರಿಗಳನ್ನು ನ್ಯಾಯಾಂಗದ ಕಟಕಟೆಗೆ ತರಬೇಕಾದ್ದು ಮತ್ತು ಭಾರತದ ವಿರುದ್ಧ ಪಾಕ್ ನೆಲದಿಂದ ನಡೆಯುತ್ತಿರುವ ಚಟುವಟಿಕೆಗಳನ್ನು ತಡೆಗಟ್ಟಬೇಕಾದ್ದು ಅನಿವಾರ್ಯ ಎಂದು ಸಿಂಗ್ ಅವರು ಜರ್ದಾರಿ ಅವರಿಗೆ ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನಿಯವರು ಹಫೀಜ್ ಸಯೀದ್ (ನಿಷೇಧಿತ ಲಷ್ಕರ್- ಇ- ತೊಯ್ಬಾ ಸಂಘಟನೆ ಸ್ಥಾಪಕ) ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿದರು ಎಂದು ಮಥಾಯ್ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.