ADVERTISEMENT

ಸಹಜ ಸ್ಥಿತಿಗೆ ಮುಂಬೈ, ಪುತ್ರನಿಂದ ಚಿತಾಭಸ್ಮ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 10:00 IST
Last Updated 19 ನವೆಂಬರ್ 2012, 10:00 IST
ಸಹಜ ಸ್ಥಿತಿಗೆ ಮುಂಬೈ, ಪುತ್ರನಿಂದ ಚಿತಾಭಸ್ಮ ಸಂಗ್ರಹ
ಸಹಜ ಸ್ಥಿತಿಗೆ ಮುಂಬೈ, ಪುತ್ರನಿಂದ ಚಿತಾಭಸ್ಮ ಸಂಗ್ರಹ   

ಮುಂಬೈ (ಪಿಟಿಐ, ಐಎಎನ್ಎಸ್): ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಅಂತ್ಯಕ್ರಿಯೆ ಭಾನುವಾರ ನಡೆದ ಬಳಿಕ ಮುಂಬೈ ನಗರವು ಸೋಮವಾರ ಸಹಜ ಜನಜೀವನದತ್ತ  ನಿಧಾನವಾಗಿ ಮರಳಿತು.

ಈ ಮಧ್ಯೆ ಇಲ್ಲಿನ ಶಿವಾಜಿ ಪಾರ್ಕ್‌ನಲ್ಲಿ ಭಾನುವಾರ ನಡೆದ ಬಾಳಾ ಸಾಹೇಬ್ ಠಾಕ್ರೆ ಅವರ ಅಂತ್ಯಕ್ರಿಯೆ ಸ್ಥಳದಲ್ಲಿ, ಸೋಮವಾರ ಠಾಕ್ರೆ ಅವರ ಮಗ ಶಿವಸೇನೆ ಪಕ್ಷದ ಕಾರ್ಯಾಧ್ಯಕ್ಷ ಉದ್ದವ್ ಠಾಕ್ರೆ ತಂದೆಯ ಚಿತಾಭಸ್ಮವನ್ನು ಸಂಗ್ರಹಿಸಿಕೊಂಡರು.

ಭಾನುವಾರ ನಡೆದ ಠಾಕ್ರೆ ಅವರ ಅಂತ್ಯಕ್ರಿಯೆ ಸಮಯದಲ್ಲಿ ಇಡೀ ಮುಂಬೈ ನಗರವು ಅಕ್ಷರಶಃ ಸ್ಥಬ್ಧಗೊಂಡಿತ್ತು. ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಠಾಕ್ರೆ ಅವರಿಗೆ ಗೌರವ ಸಲ್ಲಿಸಿದ್ದರು.

ಸೋಮವಾರ ಎಂದಿನಂತೆ ಮುಂಬೈ ನಗರವು ತನ್ನ ಸಹಜಸ್ಥಿತಿಗೆ ಮರಳಿದ್ದು,  ಸ್ಥಳೀಯ ಸಾರಿಗೆ ವ್ಯವಸ್ಥೆ ಸೇರಿದಂತೆ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳು ರಸ್ತೆಗಿಳಿದು ಸಂಚಾರ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿವೆ.  ಮಾರುಕಟ್ಟೆ ವ್ಯವಸ್ಥೆ ಕೂಡ ನಿಧಾನವಾಗಿ ಚುರುಕುಗೊಂಡಿದೆ.

ದೀಪಾವಳಿ ಹಬ್ಬದಿಂದಾಗಿ ರಜೆ ಘೋಷಣೆಯಾಗಿದ್ದ ಶಾಲಾ - ಕಾಲೇಜುಗಳು ಮಂಗಳವಾರ ಎಂದಿನಂತೆ ಆರಂಭವಾಗಲಿವೆ.

ಶಿವಸೇನೆ ನಗರದಲ್ಲಿ ಬಂದ್‌ಗೆ ಕರೆ ನೀಡಿಲ್ಲವಾದರೂ, ಸೋಮವಾರ ಠಾಕ್ರೆ ಗೌರವಾರ್ಥ ಬಂದ್ ಆಚರಿಸುವಂತೆ ಮಹಾರಾಷ್ಟ್ರ ಸಂಘಗಳ ಒಕ್ಕೂಟವು (ಫ್ಯಾಮ್) ತನ್ನ ಅಂಗ ಸಂಸ್ಥೆಗಳಿಗೆ ಸೂಚಿಸಿದೆ.

 ದೇಶದ ಹಣಕಾಸಿನ ಕೇಂದ್ರವಾಗಿರುವ ಮುಂಬೈ ನಗರದಲ್ಲಿ ಶನಿವಾರ ಮಧ್ಯಾಹ್ನ ಠಾಕ್ರೆ ಅವರ ನಿಧನದ ಸುದ್ದಿ  ಹರಡುತ್ತಿದ್ದಂತೆ ಎಲ್ಲ ವಾಣಿಜ್ಯ ಚಟುವಟಕೆಗಳು ಶನಿವಾರ ಮತ್ತು ಭಾನುವಾರ ಸ್ಥಗಿತಗೊಂಡಿದ್ದವು. ಎರಡು ದಿನ ಮುಂಬೈ ನಗರ ಮೌನಕ್ಕೆ ಜಾರಿತ್ತು.  

 


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT