ADVERTISEMENT

ಸಿದ್ಧರಾಗಿ... ಕಮಲ್ ಹಾಸನ್‌ ಮಾತನಾಡಲಿದ್ದಾರೆ...

ತಮಿಳು ನಿಯತಕಾಲಿಕದಲ್ಲಿ ಲೇಖನ ಪ್ರಕಟ: ರಾಜಕೀಯ ಪ್ರವೇಶದ ಮತ್ತೊಂದು ಸುಳಿವು

ಪಿಟಿಐ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಸಿದ್ಧರಾಗಿ... ಕಮಲ್ ಹಾಸನ್‌ ಮಾತನಾಡಲಿದ್ದಾರೆ...
ಸಿದ್ಧರಾಗಿ... ಕಮಲ್ ಹಾಸನ್‌ ಮಾತನಾಡಲಿದ್ದಾರೆ...   

ಚೆನ್ನೈ: ‘ಸಿದ್ಧರಾಗಿ... ನವೆಂಬರ್ 7ರಂದು ತಿಳಿಸುತ್ತೇನೆ’

ಹೀಗೊಂದು ಶೀರ್ಷಿಕೆಯ ಲೇಖನ ಬರೆಯುವ ಮೂಲಕ ನಟ ಕಮಲ್ ಹಾಸನ್ ಅವರು ರಾಜಕೀಯ ಪ್ರವೇಶಿಸುವ ಕುರಿತು ಮತ್ತೊಂದು ಸುಳಿವು ನೀಡಿದ್ದಾರೆ.

ಕಮಲ್ ಅವರು ತಮಿಳಿನ ‘ಆನಂದ ವಿಕಟನ್’ ನಿಯತಕಾಲಿಕಕ್ಕೆ ಪ್ರತಿ ವಾರವೂ ಲೇಖನ ಬರೆಯುತ್ತಾರೆ. ಅದರಂತೆ ಈ ಬಾರಿ ಅವರು ಈ ಲೇಖನ ಬರೆದಿದ್ದಾರೆ.

ADVERTISEMENT

ನವೆಂಬರ್ 7 ಕಮಲ್ ಹುಟ್ಟಿದ ದಿನ. ರಾಜಕೀಯ ಪ್ರವೇಶದ ಬಗ್ಗೆ ಅವರು ತಮ್ಮ ಹುಟ್ಟುಹಬ್ಬದ ದಿನವೇ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರವಾಗಿರುವಾಗಲೇ ಈ ಲೇಖನ ಪ್ರಕಟವಾಗಿದೆ.

‘ಯುವಪಡೆಯು ಸಂಘಟಿತವಾಗಲು ಕಾಯುತ್ತಿರುವುದನ್ನು ಗಮನಿಸಿದ್ದೇನೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ನನ್ನ ಕೆಲಸ. ಆ ಸಮಯ ಬಂದಿದೆ’ ಎಂದು ತಮ್ಮ ಲೇಖನದಲ್ಲಿ ಅವರು ಪ್ರಸ್ತಾಪಿಸಿದ್ದಾರೆ.

‘ಇದು ಯುವಜನರೊಂದಿಗೆ ಸಂವಹನ ನಡೆಸುವ ಕೆಲಸವಲ್ಲ. ಬದಲಾಗಿ ಯೋಜನೆಗಳನ್ನು ರೂಪಿಸುವ ತರಬೇತಿ ಕಾರ್ಯಾಗಾರ. ಬೆಂಬಲಿಗರನ್ನು ಒಟ್ಟುಹಾಕುವುದಷ್ಟೇ ಅಲ್ಲ, ನಾಯಕರನ್ನು ತಯಾರು ಮಾಡುವ ಕಾರ್ಯಾಗಾರ’ ಎಂದು ಅವರು ಹೇಳಿದ್ದಾರೆ.

‘18–35 ವರ್ಷದವರೆಗೆ ನನ್ನಲ್ಲಿ ರೂಪುಗೊಂಡ ಚಿಂತನೆಗಳು ಮತ್ತು ತತ್ವಗಳ ಬಗ್ಗೆ ಹೆಮ್ಮೆಯಿದೆ’ ಎಂದು ಹೇಳುವ ಮೂಲಕ, ಈ ವಯೋಮಾನದವರಲ್ಲಿ ತಾವು ಇರಿಸಿರುವ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಲೋಪ ಮತ್ತು ಲೂಟಿಯ ಕುರಿತಾಗಿ ಸಾಕಷ್ಟು ಮಾತನಾಡಿದ್ದೇವೆ. ಈಗ ಶಸ್ತ್ರಚಿಕಿತ್ಸೆಯ ಸಮಯ ಬಂದಿದೆ. ಆದರೆ ಶಸ್ತ್ರಕ್ರಾಂತಿಯಿಂದ ಯಾವುದೇ ಫಲವಿಲ‌್ಲ. ಅದರಿಂದ ಜೀವಹಾನಿಯಾಗುವುದೇ ಹೆಚ್ಚು’ ಎಂದು ಅವರು ಬರೆದಿದ್ದಾರೆ.

‘ತಮಿಳುನಾಡಿಗೆ ಏನಾದರೂ ಒಳಿತು ಮಾಡುವುದು ತಾವು ಮಾಡುತ್ತಿರುವ ತ್ಯಾಗ ಎಂದುಕೊಳ್ಳದೆ ಅದೊಂದು ಕರ್ತವ್ಯ ಎಂದುಕೊಂಡವರು ನಮ್ಮೊಂದಿಗೆ ಕೈಜೋಡಿಸಿ’ ಎಂದು ಆಹ್ವಾನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.