ADVERTISEMENT

‘ಸುನಂದಾ ಆತ್ಮಹತ್ಯೆಗೆ ತರೂರ್‌ ಪ್ರಚೋದನೆ’

ದೆಹಲಿ ಪೊಲೀಸರಿಂದ ಆರೋಪಪಟ್ಟಿ ಸಲ್ಲಿಕೆ

ಪಿಟಿಐ
Published 14 ಮೇ 2018, 19:30 IST
Last Updated 14 ಮೇ 2018, 19:30 IST
‘ಸುನಂದಾ ಆತ್ಮಹತ್ಯೆಗೆ ತರೂರ್‌ ಪ್ರಚೋದನೆ’
‘ಸುನಂದಾ ಆತ್ಮಹತ್ಯೆಗೆ ತರೂರ್‌ ಪ್ರಚೋದನೆ’   

ನವದೆಹಲಿ: ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರು ತಮ್ಮ ಹೆಂಡತಿ ಸುನಂದಾ ಪುಷ್ಕರ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಸುನಂದಾ ಸಾವಿನ ಪ್ರಕರಣದಲ್ಲಿ ತರೂರ್‌ ಅವರೊಬ್ಬರೇ ಆರೋಪಿಯಾಗಿದ್ದಾರೆ.

ತರೂರ್‌ ಅವರು ತಮ್ಮ ಹೆಂಡತಿಯನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು. ತರೂರ್‌ ಅವರನ್ನು ಆರೋಪಿಯಾಗಿ ಕರೆಸಿ ವಿಚಾರಣೆಗೆ ಒಳಪಡಿಸಬೇಕು ಎಂದೂ ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಆರೋಪಪಟ್ಟಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪುಟಗಳಿವೆ.

ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಧರ್ಮೇಂದ್ರ ಸಿಂಗ್‌ ಅವರ ನ್ಯಾಯಾಲಯಕ್ಕೆ ಈ ಆರೋಪಪಟ್ಟಿ ಸಲ್ಲಿಸಲಾಗಿದ್ದು ಅವರು ಇದೇ 24ರಂದು ಅದನ್ನು ಪರಿಶೀಲಿಸಲಿದ್ದಾರೆ.

ADVERTISEMENT

ದೆಹಲಿಯ ಪಂಚತಾರಾ ಹೋಟೆಲೊಂದರಲ್ಲಿ 2014ರ ಜನವರಿ 17ರಂದು ಸುನಂದಾ ಮೃತಪಟ್ಟಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 498 ಎ (ಗಂಡ ಅಥವಾ ಆತನ ಸಂಬಂಧಿಕರು ಮಹಿಳೆಯನ್ನು ಕ್ರೂರವಾಗಿ ನಡೆಸಿಕೊಳ್ಳುವುದು) ಮತ್ತು 306 (ಆತ್ಮಹತ್ಯೆಗೆ ಕುಮ್ಮಕ್ಕು) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ತರೂರ್‌ ಅವರನ್ನು ಮದುವೆಯಾಗಿ ಮೂರು ವರ್ಷ ಮೂರು ತಿಂಗಳಲ್ಲಿ ಸುನಂದಾ ಅವರು ಮೃತಪಟ್ಟಿದ್ದಾರೆ. 2010ರ ಆಗಸ್ಟ್‌ 22ರಂದು ಅವರ ಮದುವೆ ನಡೆದಿತ್ತು.

ಲಭ್ಯವಿರುವ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗಿದೆ. ತರೂರ್‌ ಅವರನ್ನು ಕಸ್ಟಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕಾದ ಅಗತ್ಯ ಇದೆ ಎಂಬುದು ಇದರಿಂದ ಕಂಡು ಬಂದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ತರೂರ್‌ ಅವರನ್ನು ಈವರೆಗೆ ಬಂಧಿಸಲಾಗಿಲ್ಲ. ತನಿಖೆಗೆ ಅಗತ್ಯ ಇದ್ದಾಗಲೆಲ್ಲ ಅವರು ಹಾಜರಾಗಿದ್ದಾರೆ.

‘ಪೊಲೀಸರ ಉದ್ದೇಶ ಅನುಮಾನಾಸ್ಪದ’

‘ಅವಿವೇಕದಿಂದ ಕೂಡಿದ ಆರೋಪಪಟ್ಟಿ ಸಲ್ಲಿಕೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಖಂಡತುಂಡವಾಗಿ ವಿರೋಧಿಸಲಾಗುವುದು. ಸುನಂದಾಳನ್ನು ಗೊತ್ತಿರುವ ಯಾರು ಕೂಡ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದನ್ನೇ ನಂಬುವುದಿಲ್ಲ, ನಾನು ಪ್ರಚೋದನೆ ನೀಡುವುದಂತೂ ಸಾಧ್ಯವೇ ಇಲ್ಲದ ಮಾತು’ ಎಂದು ತರೂರ್‌ ಟ್ವೀಟ್‌ ಮಾಡಿದ್ದಾರೆ.

‘ನಾಲ್ಕಕ್ಕೂ ಹೆಚ್ಚು ವರ್ಷಗಳ ತನಿಖೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದರೆ ದೆಹಲಿ ಪೊಲೀಸರ ತನಿಖಾ ವಿಧಾನ ಮತ್ತು ಉದ್ದೇಶದ ಬಗ್ಗೆಯೂ ಪ್ರಶ್ನೆ ಉಂಟಾಗುತ್ತದೆ. ಯಾವುದೇ ವ್ಯಕ್ತಿಯ ವಿರುದ್ಧ ಪುರಾವೆ ದೊರೆತಿಲ್ಲ ಎಂದು ದೆಹಲಿ ಪೊಲೀಸರ ಪರ ವಕೀಲ ಕಳೆದ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್‌ಗೆ ಹೇಳಿದ್ದರು. ಆರೇ ತಿಂಗಳ ಬಳಿಕ, ಈಗ ಆತ್ಮಹತ್ಯೆಗೆ ನಾನು ಪ್ರಚೋದನೆ ನೀಡಿದ್ದೇನೆ ಎನ್ನುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ರಾಜಕೀಯ ಹಿತಾಸಕ್ತಿ ಅರ್ಜಿ’

ಸುನಂದಾ ಅವರ ಸಾವಿನ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಅಕ್ಟೋಬರ್‌ 26ರಂದು ದೆಹಲಿ ಹೈಕೋರ್ಟ್‌ ವಜಾ ಮಾಡಿತ್ತು. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ, ಬದಲಿಗೆ ರಾಜಕೀಯ ಹಿತಾಸಕ್ತಿ ಅರ್ಜಿ ಎಂದು ಸ್ವಾಮಿ ಅವರನ್ನು ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು.

ಬಳಿಕ, ಸ್ವಾಮಿ ಅವರು ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿ ವಿಚಾರಣಾಯೋಗ್ಯ ಎಂಬುದನ್ನು ಸಾಬೀತು ಮಾಡುವಂತೆ ಸ್ವಾಮಿಗೆ ಸುಪ್ರೀಂ ಕೋರ್ಟ್‌ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.