ADVERTISEMENT

ಸ್ಟೆರ್‌ಲೈಟ್‌ಗೆ ಭೂಮಿ: ಆದೇಶ ರದ್ದು

ಪಿಟಿಐ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ತೂತ್ತುಕುಡಿ ತಾಮ್ರ ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ಒತ್ತಾಯಿಸಿ ಡಿಎಂಕೆ ಕಾರ್ಯಾಕಾರಿ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ನೇತೃತ್ವದಲ್ಲಿ ಪಕ್ಷದ ಶಾಸಕರು ಸದನವನ್ನು ಬಹಿಷ್ಕರಿಸಿ ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ತೂತ್ತುಕುಡಿ ತಾಮ್ರ ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ಒತ್ತಾಯಿಸಿ ಡಿಎಂಕೆ ಕಾರ್ಯಾಕಾರಿ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ನೇತೃತ್ವದಲ್ಲಿ ಪಕ್ಷದ ಶಾಸಕರು ಸದನವನ್ನು ಬಹಿಷ್ಕರಿಸಿ ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ಚೆನ್ನೈ: ವೇದಾಂತ ಗ್ರೂಪ್‌ನ ತಾಮ್ರ ಸಂಸ್ಕರಣಾ ಘಟಕ ವಿಸ್ತರಣೆಗೆ ಭೂಮಿ ನೀಡುವ ಆದೇಶವನ್ನು ತಮಿಳುನಾಡು ಸರ್ಕಾರ ರದ್ದುಗೊಳಿಸಿದೆ. ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಅಲ್ಲದೆ, ಈ ಘಟಕ ಸ್ಥಾಪನೆ ವಿರೋಧಿಸಿ ನಡೆದ ಗೋಲಿಬಾರ್ ಪ್ರಕರಣವನ್ನು ಸಿಬಿ–ಸಿಐಡಿಗೆ ವಹಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಸದನದಲ್ಲಿ ಪ್ರತಿಧ್ವನಿ: ತೂತ್ತುಕುಡಿ ಹಿಂಸಾಚಾರ ಪ್ರಕರಣ ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿತು. ಪ್ರತಿಭಟನೆ ತೀವ್ರಗೊಂಡಿದ್ದರಿಂದ ಪೊಲೀಸರು ಗೋಲಿಬಾರ್‌ ನಡೆಸುವುದು ಅನಿವಾರ್ಯವಾಗಿತ್ತು ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹೇಳಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಡಿಎಂಕೆ ಸದಸ್ಯರು ಸಭಾತ್ಯಾಗ ಮಾಡಿದರು.

ADVERTISEMENT

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತೂತ್ತುಕುಡಿಗೆ ಪ್ರತ್ಯೇಕ ತನಿಖಾ ತಂಡವನ್ನು ಕಳುಹಿಸುವುದಾಗಿ ಹೇಳಿದೆ.

ಕೈದಿಗೆ ಗುಂಡೇಟು

ನವದೆಹಲಿ: ಪೊಲೀಸ್‌ ವ್ಯಾನ್‌ನಲ್ಲಿ ಕುಳಿತಿದ್ದ ವಿಚಾರಣಾಧೀನ ಕೈದಿಯ ಮೇಲೆ ಗುಂಡು ಹಾರಿಸಿದ ಪ್ರಕರಣ ತೀಸ್‌ ಹಜಾರಿ  ಕೋರ್ಟ್‌ ಎದುರು ನಡೆದಿದೆ.

ದಿನೇಶ್‌ ಗುಂಡೇಟು ತಿಂದ ಖೈದಿ. ಆರೋಪಿ ಶಂಕಿತ ಗೋಗಿ ಗ್ಯಾಂಗ್‌ ಸದಸ್ಯ. ಕೋರ್ಟ್‌ನಲ್ಲಿ ವಿಚಾರಣೆ ಇದ್ದ ಕಾರಣ ಆತನನ್ನು ರೋಹ್ಟಕ್‌ ಜೈಲಿನಿಂದ ಕೋರ್ಟ್‌ಗೆ ಕರೆತರಲಾಗಿತ್ತು.

ಗಾಯಗೊಂಡಿರುವ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಬಾಲಕನನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ

ಬಲಿಯಾ (ಉ.ಪ್ರ): ಇದೇ 13ರಂದು ಮಾರುಕಟ್ಟೆಗೆ ಹೋಗುತ್ತಿದ್ದ ಸಂದರ್ಭದಲ್ಲಿ 26 ವರ್ಷದ ಮಹಿಳೆಯನ್ನು ಅಪಹರಿಸಿದ ಐವರು, ಮನೆಯೊಂದರದಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾರೆ. ಈ ಸಂಬಂಧ ಆಕೆಯ ಪತಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಅತ್ಯಾಚಾರಿಗಳಿಂದ ಮಹಿಳೆ ತಪ್ಪಿಸಿಕೊಂಡು ಮನೆಗೆ ಮರಳಿದ್ದು, ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿ ಆತ್ಮಹತ್ಯೆ

ಲಖನೌ: ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್‌) ಹಿರಿಯ ಪೊಲೀಸ್‌ ಅಧಿಕಾರಿ ರಾಜೇಶ್‌ ಸಾಹ್ನಿ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಪ್ರಾಂತೀಯ ಪೊಲೀಸ್ ಸೇವೆಯ (ಪಿಪಿಎಸ್‌) 1992ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಸಾಹ್ನಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯಾಗಿದ್ದರು. ಆತ್ಮಹತ್ಯೆಗೆ ಕಾರಣವೇನು ಎಂಬುದು ಗೊತ್ತಾಗಿಲ್ಲ’ ಎಂದು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಆನಂದ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.