ADVERTISEMENT

ಸ್ಥಳೀಯರಿಗೆ ಬಲೆ ಬೀಸಿದ್ದ ಲಷ್ಕರ್‌

ದೆಹಲಿ ಪೊಲೀಸರಿಂದ ಶಂಕಿತ ಉಗ್ರರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ನವದೆಹಲಿ (ಪಿಟಿಐ): ಭಯೋ­ತ್ಪಾದನಾ ಸಂಘಟನೆ ಲಷ್ಕರ್‌–ಎ–ತೈಯ­ಬಾದ ಇಬ್ಬರು ಶಂಕಿತ  ಉಗ್ರರು ಮುಜಫ್ಫರ್‌ನಗರದಲ್ಲಿ ಇಬ್ಬರು ಸ್ಥಳೀ­ಯ­ರನ್ನು ಭೇಟಿಯಾಗಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕೋಮು ಗಲಭೆಯ ಅತೃಪ್ತ ಸಂತ್ರಸ್ತ­­ರನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಂಪರ್ಕಿಸುತ್ತಿದೆ ಎಂದು ಮೂರು ತಿಂಗಳ ಹಿಂದೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣ­ವಾಗಿ­ದ್ದರು. ಆದರೆ ಲಷ್ಕರ್‌ ಉಗ್ರರು ಭೇಟಿ­ಯಾಗಿರುವ ಸ್ಥಳೀಯ ನಿವಾಸಿ­ಗಳು ಗಲಭೆ ಸಂತ್ರಸ್ತರಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಹರಿಯಾಣಾದ ಮೇವಾಟ್‌ ಪ್ರದೇಶದಲ್ಲಿ ಶಂಕಿತ ಲಷ್ಕರ್‌ ಉಗ್ರರಾದ ಮೊಹಮ್ಮದ್‌ ಶಹೀದ್‌ ಮತ್ತು ಮೊಹಮ್ಮದ್‌ ರಶೀದ್‌ ಎಂಬವರನ್ನು ಬಂಧಿಸಲಾಗಿದೆ. ಇವ­ರಿಬ್ಬರು ಮಸೀದಿ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಕ್ಕೆ ಸಂಬಂಧಿಸಿ ಮುಜಫ್ಫರ್‌­­ನಗರ ನಿವಾಸಿಗಳಾದ ಜಮೀರ್‌ ಮತ್ತು ಲಿಯಾಕತ್‌ ಎಂಬವ­ರನ್ನು ಭೇಟಿಯಾಗಿದ್ದರು ಎಂದು ದೆಹಲಿ ವಿಶೇಷ ಪೊಲೀಸ್‌ ಘಟಕದ ವಿಶೇಷ ಆಯುಕ್ತರಾದ ಶ್ರೀವಾತ್ಸವ ತಿಳಿಸಿದ್ದಾರೆ.

ಬಂಧಿತ ಉಗ್ರರಿಬ್ಬರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಮತ್ತು ಅವರ ಸಂಪರ್ಕಗಳನ್ನು ಜಾಲಾಡಿದ್ದಾರೆ.

ಸಂಪರ್ಕದ ಕತೆ: ಮುಜಫ್ಫರ್‌ನಗರದ ಕೆಲವರೊಂದಿಗೂ ಅವರು ಸಂಪರ್ಕ­ದಲ್ಲಿರುವುದು ಈ ವಿಚಾರಣೆಯಲ್ಲಿ ಗೊತ್ತಾಗಿದೆ. ರಶೀದ್‌, ಇನ್ನೊಬ್ಬ ವ್ಯಕ್ತಿಯೊಂದಿಗೆ (ಆ ವ್ಯಕ್ತಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ) ದೇವ್‌ಬಂದ್‌ಗೆ ಹೋಗಿದ್ದ.

ಅಂದು ರಾತ್ರಿ ಅವರು ಉತ್ತರ ಪ್ರದೇಶ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಲಿಯಾಕತ್‌ ಮನೆಯಲ್ಲಿ ತಂಗಿದ್ದಾರೆ. ಅಲ್ಲಿಯೇ ಲಿಯಾಕತ್‌ ಗೆಳೆಯ ಜಮೀರ್‌ನ ಪರಿಚಯವೂ ಉಗ್ರರಿಗೆ ಆಗಿದೆ.

ನಂತರ ರಶೀದ್‌, ಸ್ನೇಹಿತ ಜಮೀರ್‌ಗೆ ಕರೆ ಮಾಡಿ, ತಾನು ಒಂದು ಮಸೀದಿ ನಿರ್ಮಿಸಲು ಬಯಸಿದ್ದು ಅದಕ್ಕೆ ಹಣ ಬೇಕು ಎಂದು ಹೇಳಿದ್ದಾನೆ. ಹಣಕ್ಕಾಗಿ ಯಾರನ್ನಾದರೂ ಅಪಹರಣ ಮಾಡೋಣ ಎಂಬ ಯೋಜನೆಯನ್ನೂ ವಿವರಿಸಿದ್ದಾನೆ.

ಆದರೆ ಅವರು ಅಪಹರಣ ಮಾಡಲು ಯತ್ನಿಸುತ್ತಿರುವುದರಿಂದ ಜಮೀರ್‌ ಇವರ ಸಂಪರ್ಕ ಕಡಿದು­ಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಲಿಯಾಕತ್‌ ಮತ್ತು ಜಮೀರ್‌ ಅವರನ್ನು ಸಾಕ್ಷಿ­ಗಳೆಂದು ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.