ADVERTISEMENT

ಹಂತಕನ ಪತ್ತೆ ಹಚ್ಚಿದ `ಕೂದಲೆಳೆ'

ಸಂಶೋಧನಾ ವಿದ್ಯಾರ್ಥಿನಿ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:45 IST
Last Updated 23 ಏಪ್ರಿಲ್ 2013, 19:45 IST

ಲಖನೌ: ಸಂಶೋಧನಾ ವಿದ್ಯಾರ್ಥಿನಿಯೊಬ್ಬರ ನಿಗೂಢ ಕೊಲೆ ಪ್ರಕರಣ ಭೇದಿಸಲು ಘಟನಾ ಸ್ಥಳದಲ್ಲಿ ದೊರೆತ ಕೂದಲ ಎಳೆ ಮತ್ತು ಉಗುರಿನ ಚೂರು ಮಹತ್ವದ ಸುಳಿವು ನೀಡಿದ ಕುತೂಹಲಕಾರಿ ಘಟನೆ ಆಗ್ರಾ ನಗರದಲ್ಲಿರುವ ಡೀಮ್ಡ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ.

ಒಂದು ತಿಂಗಳ ಹಿಂದೆ ಆಗ್ರಾದ ಡೀಮ್ಸ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು.

ಕೊಲೆಗಾರನ ಪತ್ತೆಗಾಗಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದರು. ನಂತರದಲ್ಲಿ ಐಎಎಸ್ ಅಧಿಕಾರಿಯೊಬ್ಬರ ಹತ್ತಿರದ ಸಂಬಂಧಿ ಸೇರಿದಂತೆ ಇಬ್ಬರು ಶಂಕಿತರನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದರು.

ಸಂಶೋಧನಾ ವಿದ್ಯಾರ್ಥಿನಿಯ ಸಹಪಾಠಿಯೇ ಆಕೆಯನ್ನು ಕೊಲೆ ಮಾಡಿದ ವ್ಯಕ್ತಿಯಾಗಿದ್ದ. ಕೊಲೆಗೆ ಮುನ್ನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

`ಕೊಲೆಗಾರನನ್ನು ಉದಯ್ ಸ್ವರೂಪ್ ಎಂದು ಗುರುತಿಸಲಾಗಿದೆ. ಕೊಲೆಯಾದ ಸ್ಥಳದಲ್ಲಿ ದೊರೆತ  ಕೂದಲಿನ ಎಳೆಯನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದೆವು. ಫಲಿತಾಂಶ ಕೊಲೆಗಾರನ ಡಿಎನ್‌ಎ ಹೋಲುತ್ತಿತ್ತು' ಎಂದು ಆಗ್ರಾ ಪೊಲೀಸ್ ಮುಖ್ಯಸ್ಥ ಸುಭಾಶ್ ಚಂದ್ರ ದುಬೆ ವಿವರಿಸಿದ್ದಾರೆ.

`ಬಂಧಿತ ಉದಯ್, ಸಂಶೋಧನಾ ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ' ಎಂದು ದುಬೆ ತಿಳಿಸಿದ್ದಾರೆ.
ಕೊಲೆಗಾರ ಉದಯ್, ಆಕೆಯನ್ನು ಮದುವೆಯಾಗುವಂತೆ ಕೇಳಿದ್ದಾನೆ. ಆದರೆ ವಿದ್ಯಾರ್ಥಿನಿ ಅದನ್ನು ನಿರಾಕರಿಸಿದ್ದಲ್ಲದೇ, ಈ ವಿಷಯವನ್ನು ಕುಟುಂಬದವರ ಗಮನಕ್ಕೂ ತಂದಿದ್ದಾಳೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದಲ್ಲಿ ಉದಯ್ ಜೊತೆಗೆ ಲ್ಯಾಬ್ ಟೆಕ್ನೀಷಿಯನ್ ಯಶ್‌ವೀರ್ ಸಂಧು ಎಂಬುವವನ್ನು ಬಂಧಿಸಿದ್ದಾರೆ. ತನಿಖಾಧಿಕಾರಿಗಳು ಇನ್ನು ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ' ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.