ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಟ್ರಸ್ಟ್ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದ್ದು, ಅವರನ್ನು ಲೋಕಪಾಲ ಮಸೂದೆ ಕರಡು ಸಮಿತಿಯಿಂದ ತೆಗೆದುಹಾಕುವಂತೆ ಆಗ್ರಹಿಸಿ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ದೆಹಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
‘ನ್ಯಾಷನಲ್ ಅ್ಯಂಟಿ ಕರಪ್ಷನ್ ಪಬ್ಲಿಕ್ ಪವರ್’ ಸಂಸ್ಥೆ ಈ ಅರ್ಜಿ ಸಲ್ಲಿಸಿದ್ದು, ‘ಹಿಂದಿ ಸ್ವರಾಜ್ ಟ್ರಸ್ಟ್’ನಲ್ಲಿ ಎರಡು ಲಕ್ಷ ರೂಪಾಯಿ ದುರುಪಯೋಗಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿ.ಬಿ.ಸಾವಂತ್ ಅವರು ಹಜಾರೆ ಅವರು ಕಾರಣ ಎಂದು ತಿಳಿಸಿದ್ದರು. ಈ ಟ್ರಸ್ಟನ್ನು ಹಜಾರೆ ಅವರು ನಡೆಸುತ್ತಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರದ ರಿಲೆಗಾಂವ್ ಸಿದ್ದಿ ಗ್ರಾಮದಲ್ಲಿ ಹಜಾರೆ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಈ ಹಣ ದುರುಪಯೋಗ ಆಗಿದೆ ಎಂದೂ ಹೇಳಲಾಗಿದೆ.ನ್ಯಾ.ಸಾವಂತ್ ಅವರು ತಮ್ಮ ವರದಿಯಲ್ಲಿ ‘ಹಿಂದಿ ಸ್ವರಾಜ್ ಟ್ರಸ್ಟ್’ನಲ್ಲಿ ಎರಡು ಲಕ್ಷ ರೂಪಾಯಿ ಹಣ ದುರುಪಯೋಗ ಆಗಿರುವುದು ಕಂಡು ಬಂದಿದೆ. ಇದು ಭ್ರಷ್ಟಾಚಾರಕ್ಕೆ ಸಮವಾಗಿದೆ’ ಎಂದು ತಿಳಿಸಿದ್ದರು ಎನ್ನುವ ಅಂಶವನ್ನೂ ಅರ್ಜಿಯಲ್ಲಿ ಸೇರಿಸಲಾಗಿದೆ.
ವಿಸ್ತೃತ ತನಿಖೆ ನಂತರ ನ್ಯಾ.ಸಾವಂತ್ ನೇತೃತ್ವದ ಆಯೋಗ, 2005ರಲ್ಲಿ ತನ್ನ ವರದಿ ಸಲ್ಲಿಸಿದ್ದು, ಸೂಕ್ತ ರೀತಿಯಲ್ಲಿ ಆಡಳಿತ ನಿರ್ವಹಣೆ ಮಾಡದ ಕಾರಣ ಟ್ರಸ್ಟ್ನಲ್ಲಿನ ಹಣ ದುರುಪಯೋಗಕ್ಕೆ ಹಜಾರೆ ಅವರೇ ಕಾರಣ ಎಂದು ಸ್ಪಷ್ಟಪಡಿಸಿತ್ತು. ಹಣ ದುರುಪಯೋಗದ ತನಿಖೆಗಾಗಿ 2003ರಲ್ಲಿ ನ್ಯಾಯಮೂರ್ತಿ ಸಾವಂತ್ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.