ADVERTISEMENT

ಹಣದುಬ್ಬರ: ದಿಟ್ಟವಾಗಿ ಎದುರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2010, 8:20 IST
Last Updated 21 ಡಿಸೆಂಬರ್ 2010, 8:20 IST

ನವದೆಹಲಿ (ಪಿಟಿಐ): ಮುಂದಿನ ಮಾರ್ಚ್ ತಿಂಗಳ ವೇಳೆಗೆ ದೇಶದಲ್ಲಿ ಹಣದುಬ್ಬರ ಶೇಕಡಾ 5.5ಕ್ಕೆ ಸ್ಥಿರಗೊಳ್ಳಲಿದೆ ಎಂದು ಪ್ರಧಾನಿ ಮನಮೋಹನ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಮಹಾಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಗಳು ಕಾಳಸಂತೆಯ ಮಾರುಕಟ್ಟೆ ಮತ್ತು ಲಾಭದಾಯಕ ಉದ್ದಿಮೆಗಳ ಮೇಲೆ ಹದ್ದಿನ ಕಣ್ಣಿರಿಸಬೇಕು ಎಂದು ಸೂಚಿಸಿದರು.

ನಿರ್ಣಯ: ಹಣದುಬ್ಬರವನ್ನು ದಿಟ್ಟವಾಗಿ ಎದುರಿಸುವಂತೆ ಕಾಂಗ್ರೆಸ್ ಪಕ್ಷವು ಸರ್ಕಾರಕ್ಕೆ ಸಲಹೆ ನೀಡಿದೆ. ಮಹಾಧಿವೇಶನದಲ್ಲಿ ಸ್ವೀಕರಿಸಲಾದ ನಿರ್ಣಯದಲ್ಲಿ ಪಕ್ಷದ ಆರ್ಥಿಕ ವಿಭಾಗವು ಈ ಅಂಶಕ್ಕೆಹೆಚ್ಚಿನ ಒತ್ತು ನೀಡಿದೆ.

‘ಅಸಾಮರ್ಥ್ಯ ಅಥವಾ ಭ್ರಷ್ಟಾಚಾರವನ್ನು ಸಹಿಸಿಕೊಂಡು ಕೂರಬೇಡಿ. ಇದು ದೇಶದ ಆರ್ಥಿಕ ವೃದ್ಧಿಗೆ ಮಾರಕವಾದದ್ದು. ಇದನ್ನು ನಿಷ್ಕಪಟ ಧೋರಣೆ ಮತ್ತು ಧೈರ್ಯದಿಂದ ಎದುರಿಸಿ ಎಂದು ನಿರ್ಣಯದಲ್ಲಿ ಸೂಚಿಸಲಾಗಿದೆ.

ದೇಶದ ಆರ್ಥಿಕ ಕ್ಷೇತ್ರದ ಅಭಿವೃದ್ಧಿಗಾಗಿ ಯುಪಿಎ ಸರ್ಕಾರ 10 ಅಂಶಗಳ ಕಾರ್ಯಕ್ರಮವೊಂದನ್ನು ರೂಪಿಸಿಕೊಳ್ಳುವಂತೆಯೂ ಅದು ಸಲಹೆ ನೀಡಿದೆ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳೂ ಕೂಡಾ ಭ್ರಷ್ಟಾಚಾರ ಮತ್ತು ಅಸಾಮರ್ಥ್ಯವನ್ನು ದಿಟ್ಟವಾಗಿ ಎದುರಿಸಬೇಕು. ಇಲ್ಲದೇ ಹೋದರೆ ವ್ಯವಸ್ಥೆಯಲ್ಲಿ ಕೃತಕ ಅಭಾವ ಮತ್ತು ಬೆಲೆ ಏರಿಕೆ ಸೃಷ್ಟಿಯಾಗುತ್ತದೆ ಎಂದು ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.