ADVERTISEMENT

ಹಸಿರು ರಕ್ಷಣೆಗೆ ಮಾದರಿ ಕ್ರಮ-ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 17:55 IST
Last Updated 3 ಫೆಬ್ರುವರಿ 2011, 17:55 IST

ನವದೆಹಲಿ (ಪಿಟಿಐ):  ಹಸಿರು ಪ್ರದೇಶಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಹಾಗೂ ಪರಿಸರ ನಾಶ ತಡೆಗೆ ಮಾದರಿ ನಿಯಂತ್ರಣ ಕ್ರಮಗಳ ಜಾರಿಗೆ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ಇಲ್ಲಿ ಸಹಮತ ವ್ಯಕ್ತಪಡಿಸಿದರು.

 ‘ದೆಹಲಿ ಸುಸ್ಥಿರ ಅಭಿವೃಧ್ಧಿ ಶೃಂಗ ಸಭೆ-2011’ ಉದ್ಘಾಟಿಸಿ ಅವರು ಮಾತನಾಡಿದರು.ಅಭಿವೃದ್ಧಿ ಯೋಜನೆಗಳು ಪರಿಸರಕ್ಕೆ ಪೂರಕವಾಗಿರಬೇಕು. ಪರಿಸರ ಸಂರಕ್ಷಣೆ ಹಾಗೂ ಹಸಿರು ನಾಶ ತಡೆಗೆ ಸೂಕ್ತ ನಿಯಂತ್ರಣ ಕ್ರಮಗಳನ್ನೂ ಜಾರಿಗೊಳಿಸಬೇಕು.

ಆದರೆ ಹಳೆಯ ‘ಪರ್ಮಿಟ್ ರಾಜ್’ ವ್ಯವಸ್ಥೆಗೆ ಮರಳಲು ಅವಕಾಶ ಇರಬಾರದು ಎಂದು ಸಲಹೆ ನೀಡಿದರು. ‘ಮಾಲಿನ್ಯ ತುಂಬುವವರು ಅದರ ಪ್ರಮಾಣಕ್ಕೆ ತಕ್ಕಂತೆ ಶುಲ್ಕ ಪಾವತಿಸಬೇಕು’ ಎಂಬ ಕಟ್ಟು ನಿಟ್ಟಿನ ನೀತಿಯನ್ನು ವಸತಿ ಮಾಲಿನ್ಯ ನಿಯಂತ್ರಣದಲ್ಲಿ ಬಳಸಬೇಕು ಎಂದರು.ಶೃಂಗಸಭೆಯಲ್ಲಿ ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ,  ಡೊಮಿನಿಕ್ ರಿಪಬ್ಲಿಕ್ ಅಧ್ಯಕ್ಷ ಲಿಯೊನೆಲ್ ಫೆರ್ನಾಂಡಸ್ ಮುಂತಾದವರು ಪಾಲ್ಗೊಂಡಿದ್ದರು.

ಕರ್ಜೈ-ಸಿಂಗ್ ಮಾತುಕತೆ: ಪ್ರಧಾನಿ ಮನಮೋಹನ್ ಸಿಂಗ್ ಅವರು ಗುರುವಾರ ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ ಅವರನ್ನು ಭೇಟಿ ಮಾಡಿ ಆ ದೇಶದಲ್ಲಿ ದುಡಿಯುತ್ತಿರುವ 4000 ಭಾರತೀಯ ಕಾರ್ಮಿಕರ ಭದ್ರತೆಗೆ ಮನವಿ ಮಾಡಿದರು.

ಕರ್ಜೈ ನಿವಾಸಕ್ಕೆ ತೆರಳಿದ ಪ್ರಧಾನಿ ದ್ವಿಪಕ್ಷೀಯ ಆಸಕ್ತಿಯ ವಿಷಯಗಳನ್ನು ಚರ್ಚಿಸಿದರು. ಈ ಸಂದರ್ಭದಲ್ಲಿ ಭಾರತೀಯ ಕಾರ್ಮಿಕರ ರಕ್ಷಣೆಗೆ ಕ್ರಮಕೈಗೊಳ್ಳಬೇಕೆಂದೂ ಮನವಿ ಮಾಡಿದರು.ಭಾರತ ಪ್ರವಾಸಕ್ಕಾಗಿ ಬುಧವಾರ ನವದೆಹಲಿಗೆ ಆಗಮಿಸಿರುವ ಕರ್ಜೈ, ಪ್ರಧಾನಿಗೆ ಎಲ್ಲಾ ರೀತಿಯ    ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.