ADVERTISEMENT

ಹಸಿವು ತಣಿಸಿದ ಭ್ರಮೆ

ಕಾಂಗ್ರೆಸ್ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ (ಪಿಟಿಐ): ಜಗತ್ತಿನ ದೃಷ್ಟಿಯಲ್ಲಿ ರಾಷ್ಟ್ರದ ಗೌರವವನ್ನು ಮಣ್ಣುಪಾಲು ಮಾಡುವುದಕ್ಕೆ ಅವಕಾಶ ನೀಡುವ ಆಹಾರ ಭದ್ರತೆ ಮಸೂದೆಯ ಸಾರ್ಥಕತೆಯನ್ನು ಪ್ರಶ್ನಿಸಿರುವ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಚಾರ ಸವಿತಿ ಅಧ್ಯಕ್ಷ ನರೇಂದ್ರ ಮೋದಿ, ಈ ಮೂಲಕ `ನಾಯಿ ಮರಿ' ವಿವಾದಕ್ಕೆ ಸಂಬಂಧಿಸಿದಂತೆ ತಮ್ಮನ್ನು ಟೀಕಿಸಿದ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಇಲ್ಲಿಯ ಹೆಸರಾಂತ ಫರ್ಗುಸನ್ ಕಾಲೇಜಿನ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, `ದೇಶದ ಮುಂದೆ ಇದೀಗ ಅವರು (ಕಾಂಗ್ರೆಸ್) ಆಹಾರ ಭದ್ರತೆ ಮಸೂದೆ ತಂದಿದ್ದಾರೆ. ಆದರೆ ಆಗಲೇ ಹಸಿದವರ ಹೊಟ್ಟೆ ತಣಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ' ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷವು `ಜಾತ್ಯತೀತತೆಯ ಬುರ್ಖಾ'ದ ಸೋಗು ಹಾಕಿಕೊಂಡು ತನ್ನ ವೈಫಲ್ಯ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ ಎಂದು ಲೇವಡಿ ಮಾಡಿದರು. ಕಾಮನ್‌ವೆಲ್ತ್  ಕ್ರೀಡಾಕೂಟದಲ್ಲಿ ನಡೆದ ಭಾರಿ ಅವ್ಯವಹಾರ ಕಾಂಗ್ರೆಸ್ ನೀಡಿದ ಕೊಡುಗೆ ಎಂದು  ಪ್ರಸ್ತಾಪಿಸಿದ ಮೋದಿ, ಕ್ರೀಡಾಕೂಟದ ಸಂಘಟನಾ ಸಮಿತಿ ಮಾಜಿ ಅಧ್ಯಕ್ಷ, ಪುಣೆ ನಗರದವರೇ ಆದ ಸುರೇಶ್ ಕಲ್ಮಾಡಿ ಅವರನ್ನು ತರಾಟೆಗೆ ತೆಗೆದುಕೊಂಡರು.

`ಎರಡು ರಾಷ್ಟ್ರಗಳು ಕ್ರೀಡೆಗಳನ್ನು ನಡೆಸಿದವು. ದಕ್ಷಿಣ ಕೊರಿಯಾ ಒಲಿಂಪಿಕ್ಸ್ ಸಂಘಟಿಸಿದರೆ ಭಾರತ   ಕಾಮನ್‌ವೆಲ್ತ್ ಕ್ರೀಡೆ ನಡೆಸಿತು. ಕೊರಿಯಾ ಕ್ರೀಡೆಯ ಮೂಲಕ ತನ್ನ ದೇಶಕ್ಕೆ ಗೌರವ ತಂದರೆ 120 ಕೋಟಿ ಜನಸಂಖ್ಯೆಯ ನಮ್ಮ ದೇಶ ಜಗತ್ತಿನ ಎದಿರು ಗೌರವ ಕಳೆದುಕೊಂಡಿತು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.