ADVERTISEMENT

ಹಿಮದ ಹೊದಿಕೆಯಲ್ಲಿ ಕಾಶ್ಮೀರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಶ್ರೀನಗರ (ಪಿಟಿಐ): ಲಡಾಖ್ ಪ್ರಾಂತ್ಯ ಶನಿವಾರ ಮುಂಜಾನೆ ಅಕ್ಷರಶಃ  ಚಳಿಯಿಂದ ತತ್ತರಿಸಿತು. ಅಂತೆಯೇ ಮೈ ಕೊರೆಯುವಂತೆ ಬೀಸುತ್ತಿರುವ ಥಂಡಿ ಗಾಳಿ ಕಾಶ್ಮೀರ ಕಣಿವೆಯಾದ್ಯಂತ ಮತ್ತಷ್ಟು ಬಿರುಸುಗೊಂಡಿತ್ತು.

ಲೆಹ್ ಪಟ್ಟಣದಲ್ಲಿ ತಾಪಮಾನ ಮೈನಸ್ 21.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ಪರಿಣಾಮ ಈ ಬಾರಿಯ ಕನಿಷ್ಠ ಉಷ್ಣಾಂಶ  ಈ ಪ್ರದೇಶದಲ್ಲಿ ದಾಖಲಾಯಿತು ಎಂದು ಹವಾಮಾನ ವಿಭಾಗದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸಮೀಪದ ಕಾರ್ಗಿಲ್ ಪಟ್ಟಣದಲ್ಲಿ ತಾಪಮಾನ ಮೈನಸ್ 21.0 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾದರೆ ಪಹಲ್‌ಗಾಂವ್‌ನಲ್ಲಿ ಮೈನಸ್ 16.5, ಗುಲ್‌ಮಾರ್ಗ್‌ನಲ್ಲಿ ಮೈನಸ್ 16.2 ಹಾಗೂ ಶ್ರೀನಗರದಲ್ಲಿ ಮೈನಸ್ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಇತ್ತು. ಕಣಿವೆಯ ವಿವಿಧೆಡೆ ಹಿಮಪಾತ ಇನ್ನೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಪಂಜಾಬ್-ಹರಿಯಾಣ ರಾಜ್ಯಗಳಲ್ಲಿ ಶೀತಗಾಳಿ: ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಶನಿವಾರ ಮುಂಜಾನೆ ತಾಪಮಾನ 0.3 ಡಿಗ್ರಿಗೆ ಇಳಿದಿದ್ದು ಸಾಮಾನ್ಯ ಸ್ಥಿತಿಗಿಂತಲೂ ಕೆಳಕ್ಕೆ ಜಾರಿದೆ.
ಎರಡೂ ರಾಜ್ಯಗಳಲ್ಲಿ ಗಾಢ ಮಂಜು ಕವಿದಿದ್ದು, ರಸ್ತೆ ಮತ್ತು ರೈಲು ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿದೆ.

ಥರಗುಟ್ಟುತ್ತಿರುವ ದೆಹಲಿ: ಶನಿವಾರ ಮುಂಜಾನೆ ರಾಜಧಾನಿ ದೆಹಲಿಯಲ್ಲಿ ಉಷ್ಣಾಂಶ ಕನಿಷ್ಠಮಟ್ಟಕ್ಕೆ ಇಳಿಯುವ ಮೂಲಕ ಸಾಮಾನ್ಯ ಜನಜೀವನ ಚಳಿಯಿಂದ ತೀವ್ರ ತೊಂದರೆ ಅನುಭವಿಸುವಂತಾಯಿತು.

ಶುಕ್ರವಾರ 4.5ರಷ್ಟು ಇದ್ದ ತಾಪಮಾನ ಶನಿವಾರ ಮುಂಜಾನೆ 5.4 ಡಿಗ್ರಿ ಸೆಲ್ಸಿಯಸ್‌ನಷ್ಟು ಇತ್ತು ಎಂಬುದೇ ಸಮಾಧಾನಕರ ಅಂಶವಾಗಿ ಕಂಡು ಬಂದಿತು. ಎಲ್ಲೆಡೆ ದಟ್ಟ ಮಂಜು ಕವಿದಿತ್ತಾದರೂ ವಿಮಾನಗಳ ಹಾರಾಟಕ್ಕೆ ಯಾವುದೇ ಅಡಚಣೆ ಉಂಟಾಗಲಿಲ್ಲ.

ಪ್ರಯಾಣಿಕರ ರಕ್ಷಣೆ: ಅತೀವ ಶೀತಗಾಳಿ, ಹಿಮಪಾತದಿಂದ ತೊಂದರೆಗೀಡಾಗಿ ಜಮ್ಮು ಮತ್ತು ಕಾಶ್ಮೀರದ ನಡುವೆ ಸಿಕ್ಕಿಹಾಕಿಕೊಂಡಿದ್ದ ಸುಮಾರು 550 ಪ್ರಯಾಣಿಕರನ್ನು ಭಾರತೀಯ ವಾಯು ಪಡೆ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ ಎಂದು ಕಾಶ್ಮೀರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

10 ದಿನಗಳಿಂದ  ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಇಲ್ಲಿ ಪ್ರಯಾಣಿಕರು ಮತ್ತು ಈ ಮಾರ್ಗಮಧ್ಯದಲ್ಲಿನ ಕರ್ತವ್ಯನಿರತ ಸೈನಿಕರು ತೀವ್ರ ತೊಂದರೆಗೆ ಒಳಗಾಗ್ದ್ದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.