ADVERTISEMENT

ಹಿಸ್ಸಾರ್: ಹರ್ಯಾಣ ಕಾಂಗ್ರೆಸ್ ಜನಹಿತ- ಬಿಷ್ಣೋಯ್ ಜಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 10:10 IST
Last Updated 17 ಅಕ್ಟೋಬರ್ 2011, 10:10 IST

ಹಿಸ್ಸಾರ್ (ಹರ್ಯಾಣ), (ಐಎಎನ್‌ಎಸ್): ಹರ್ಯಾಣದ ಹಿಸ್ಸಾರ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದೆ. ಬಿಜೆಪಿ ಮೈತ್ರಿಕೂಟದ ಹರ್ಯಾಣ ಜನಹಿತ ಕಾಂಗ್ರೆಸ್ (ಎಚ್‌ಜೆಸಿ)ನ ಕುಲದೀಪ್ ಬಿಷ್ಣೋಯ್ ಭರ್ಜರಿ ವಿಜಯ ಸಾಧಿಸಿದ್ದಾರೆ.

ಇಂಡಿಯನ್ ನ್ಯಾಷನಲ್ ಲೋಕ ದಳದ (ಐಎನ್‌ಎಲ್‌ಡಿ) ಅಜಯ್ ಚೌತಾಲಾ ಎರಡನೇ ಸ್ಥಾನವನ್ನು ಮತ್ತು ಕಾಂಗ್ರೆಸ್‌ನ ಜೈ ಪ್ರಕಾಶ್ ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದ್ದಾರೆ.

ಹರ್ಯಾಣ ರಾಜ್ಯದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಪುತ್ರ ಬಿಷ್ಣೋಯ್ ಅವರು ತಮ್ಮ ಎದುರಾಳಿಗಳಾದ ಅಜಯ್ ಚೌತಾಲಾ ಮತ್ತು ಕಾಂಗ್ರೆಸ್  ಪಕ್ಷದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಜೈ ಪ್ರಕಾಶ್ ಅವರನ್ನು  32 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಹಿಸ್ಸಾರ್ ಲೋಕಸಭಾ ಕ್ಷೇತ್ರದಲ್ಲಿ ಜಯದ ನಗು ಬೀರಿದ್ದಾರೆ.

ಅಣ್ಣಾ ಹಜಾರೆ ತಂಡದವರು ಹಿಸ್ಸಾರ್ ಲೋಕಸಭಾ ಉಪಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಕೈಗೊಂಡಿದ್ದರು. `ಭ್ರಷ್ಟಾಚಾರ ವಿರೋಧಿ ಹೋರಾಟ ತಂಡಕ್ಕೆ ನಾನು ಯಾವುದೇ ರೀತಿಯಲ್ಲಿ ಬಾಧ್ಯನಲ್ಲ~ ಎಂದು ಬಿಷ್ಣೋಯ್ ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.

ಫಲಿತಾಂಶ ಘೋಷಣೆಯ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಬಿಷ್ಣೋಯ್ ಅವರು, `ತಮ್ಮ ಪ್ರತಿಸ್ಪರ್ಧಿಗಳಿಂದ 32ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿರುವ ಈ ಗೆಲುವು ನನ್ನ ತಂದೆಗೆ ಹಾಗೂ ಬಿಜೆಪಿ, ಹರ್ಯಾಣ ಜನಹಿತ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ~ ಎಂದರು.

`ಸಂಸತ್ತಿನಲ್ಲಿ ಜನಲೋಕಪಾಲ ಮಸೂದೆಯನ್ನು ಬೆಂಬಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಣ್ಣಾ ತಂಡವು ಹಿಸ್ಸಾರ್ ನಲ್ಲಿ ಕಾಂಗ್ರೆಸ್ ವಿರೋಧಿ ಅಭಿಯಾನವನ್ನು ಕೈಗೊಂಡಿತ್ತು. ಜನರು ನನಗೆ ಮತ ನೀಡಲು ತೀರ್ಮಾನಿಸಿದರು~ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT