ADVERTISEMENT

ಹೈಸ್ಪೀಡ್ ರೈಲು ತಾಂತ್ರಿಕ ಕಾರ್ಯ ಪ್ರಗತಿ: ಸಹಾಯ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 17:25 IST
Last Updated 25 ಫೆಬ್ರುವರಿ 2011, 17:25 IST

ನವದೆಹಲಿ: ರೈಲ್ವೆ ಇಲಾಖೆಯು ಹೈಸ್ಪೀಡ್ ರೈಲು ಯೋಜನೆಯನ್ನು ಅತ್ಯಂತ ತುರ್ತಾಗಿ ಕೈಗೆತ್ತಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ತಾಂತ್ರಿಕ ಮತ್ತು ಇತರ ಕಾರ್ಯ ಪ್ರಗತಿಯಲ್ಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿವೇಕ್ ಸಹಾಯ್ ತಿಳಿಸಿದ್ದಾರೆ.

ಇಲ್ಲಿನ ರೈಲು ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈವಿಕ ಶೌಚಾಲಯಗಳ ಪ್ರಾಯೋಗಿಕ ಪರೀಕ್ಷೆ ಮುಗಿದಿದೆ, ಈ ವರ್ಷವೇ ಅವುಗಳನ್ನು ಜಾರಿಗೆ ತರಲಾಗುತ್ತದೆ ಎಂದರು.ಪ್ಲಾಟ್‌ಫಾರ್ಮ್‌ಗಳು ಮತ್ತು ನಿಲ್ದಾಣಗಳ ಸುತ್ತಮುತ್ತ ನೈರ್ಮಲ್ಯ ಕಾಯ್ದುಕೊಳ್ಳುವ ಭರವಸೆ ನೀಡಿದ ಅವರು, ಈ ಕಾರ್ಯ ಸಹ ಈ ವರ್ಷ ಆರಂಭವಾಗಲಿದೆ ಎಂದರು.

ನಿರಂತರ ದಾಳಿಗಳ ನಡುವೆಯೂ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ದಲ್ಲಾಳಿಗಳ ಪಿಡುಗು ಸಂಪೂರ್ಣ ನಿಯಂತ್ರಣಕ್ಕೆ ಬಾರದ್ದನ್ನು ಒಪ್ಪಿಕೊಂಡ ಅವರು, ಇಂತಹ ಅನೈತಿಕ ಸಂಗತಿಗಳಿಗೆ ಪ್ರೋತ್ಸಾಹ ನೀಡದಂತೆ ಜನರಲ್ಲಿ ಮನವಿ ಮಾಡಿದರು.ಹೊಸ ಆಹಾರ ಪೂರೈಕೆ ನೀತಿ ಜಾರಿಗೆ ಬಂದ ಬಳಿಕ ಆಹಾರ ಗುಣಮಟ್ಟದ ಬಗೆಗಿನ ದೂರುಗಳು ಶೇ 30ರಷ್ಟು ಕಡಿಮೆಯಾಗಿವೆ. ಆಹಾರ ಪೂರೈಕೆ ಕಾರ್ಯವನ್ನು ಸ್ವತಃ ಇಲಾಖೆಯೇ ವಹಿಸಿಕೊಂಡ ಬಳಿಕ ಪರಿಸ್ಥಿತಿ ಇನ್ನಷ್ಟು ಸುಧಾರಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.