ನಿಜಾಮಾಬಾದ್ (ಪಿಟಿಐ): ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಒದಗಿಸುವಲ್ಲಿ ಕೇಂದ್ರ ಸರ್ಕಾರ ತಾನು ಕೊಟ್ಟ ಭರವಸೆಯಿಂದ ಹಿಂದೆ ಸರಿದಿದೆ ಎಂದು ಆರೋಪಿಸಿರುವ ಬಿಜೆಪಿಯ ರಾಷ್ಟ್ರೀಯ ನಾಯಕ ಎಲ್.ಕೆ.ಅಡ್ವಾಣಿ ಅವರು, ಕೇಂದ್ರ ಸರ್ಕಾರ ದೃಢ ನಿರ್ಧಾರ ಕೈಗೊಂಡು ಹೊಸ ವರ್ಷಕ್ಕಾದರೂ ಪ್ರತ್ಯೇಕ ತೆಲಂಗಾಣ ರಾಜ್ಯದ ಕನಸು ನನಸಾಗುವಂತೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
ತಮ್ಮ ಜನ ಚೇತನ ಯಾತ್ರೆಯ ಸಂದರ್ಭದಲ್ಲಿ ಬುಧವಾರ ಇಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ~ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒಂದು ದೃಢ ನಿರ್ಧಾರ ಕೈಗೊಂಡು ಚಳಿಗಾಲದ ಅಧಿವೇಶನದಲ್ಲಿ ಈ ಸಂಬಂಧ ಮಸೂದೆಯೊಂದನ್ನು ಮಂಡಿಸಿ 2012ರ ಜನವರಿ 1 ರಂದು ತೆಲಂಗಾಣ ರಾಜ್ಯ ರಚನೆಯಾಗುವಂತೆ ಮಾಡಲಿ~ ಎಂಬುದು ನನ್ನ ಹಾರೈಕೆ ಎಂದರು.
~ಪ್ರತ್ಯೇಕ ರಾಜ್ಯ ರಚನೆಗೆ ಆಂಧ್ರ ಪ್ರದೇಶದ ವಿಧಾನ ಸಭೆ ನಿರ್ಣಯ ಅಂಗಿಕರಿಸಬೇಕಿಲ್ಲ, ಸಂಸತ್ತು ಮುಂಬರುವ ಚಳಿಗಾಲದ ಅಧಿವೇಶನದಲ್ಲಿಯೇ ಈ ಕುರಿತು ನಿರ್ಣಯ ಅಂಗಿಕರಿಸಿ ನೂತನ ರಾಜ್ಯ ರಚನೆಗೆ ಹಸಿರು ನಿಶಾನೆ ನೀಡಬಹುದು~ ಎಂದು ಅವರು ಪ್ರತಿಪಾದಿಸಿದರು.
ಎರಡು ವರ್ಷಗಳಿಂದು ಯುಪಿಎ ಸರ್ಕಾರ ದೃಢ ನಿರ್ಧಾರ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದರಿಂದ ಈ ಪ್ರದೇಶಕ್ಕೆ ಅನ್ಯಾಯವಾಗುತ್ತಿದೆ. 15 ದಿನಗಳಲ್ಲಿ ಪ್ರತ್ಯೇಕ ರಾಜ್ಯ ರಚಿಸುವುದಾಗಿ ನುಡಿದಿದ್ದ ಗೃಹ ಸಚಿವರು ನಂತರ ತಮ್ಮ ಮಾತಿನಿಂದ ಹಿಂದೆ ಸರಿದರು ಎಂದು ಅಡ್ವಾಣಿ ಅವರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.