ನವದೆಹಲಿ (ಪಿಟಿಐ): ‘ದರ್ಶನ ನೀಡಲು ಪ್ರಧಾನ ಮಂತ್ರಿಯವರೇನು ದೇವರೆ?’
ಈ ಪ್ರಶ್ನೆ ಕೇಳಿ ಬಂದಿದ್ದು ಬುಧವಾರ ಲೋಕಸಭೆಯಲ್ಲಿ. ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಪರಿಯಿದು. ಈ ಪ್ರಶ್ನೆಯಿಂದ ಸದನ ಕೆಲಕಾಲ ನಗೆಯಲೆಯಲ್ಲಿ ತೇಲಿತು.
‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಸದನದಲ್ಲಿ ತಮ್ಮ ಮುಖ ತೋರಬೇಕು. ಬಜೆಟ್ ಮೇಲಿನ ಚರ್ಚೆ ನಡೆಯುವ ವೇಳೆಯಲ್ಲಾದರೂ ಅವರು ಸದನದಲ್ಲಿ ಹಾಜರಿರಬೇಕು’ ಎಂದು ಮಂಗಳವಾರ ಖರ್ಗೆ ಅವರು ಲೋಕಸಭೆಯಲ್ಲಿ ಒತ್ತಾಯಿಸಿದ್ದರು.
ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ‘ಪ್ರಶ್ನೋತ್ತರ ವೇಳೆಯಲ್ಲಿ ಪ್ರಧಾನ ಮಂತ್ರಿಯವರು ಸದನದಲ್ಲಿದ್ದರು. ನೀವು ಅವರ ದರ್ಶನ ಪಡೆದಿರಿ’ ಎಂದರು.
ಈ ಮಾತಿಗೆ ತಿರುಗೇಟು ನೀಡಿದ ಖರ್ಗೆ, ‘ದರ್ಶನ ನೀಡಲು ಅವರೇನು ದೇವರೆ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.