ADVERTISEMENT

‘ಮರ್ಯಾದೆಗೇಡಿ ಹತ್ಯೆ’ ಸಮರ್ಥನೀಯವಲ್ಲ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST
ಶೆಲ್ಜಾ
ಶೆಲ್ಜಾ   

ನವದೆಹಲಿ (ಪಿಟಿಐ): ‘ಮರ್ಯಾದೆ­ಗೇಡಿ ಹತ್ಯೆ’ಯಂತಹ ಕೃತ್ಯವನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲಾ­ಗದು ಎಂದಿರುವ ಕೇಂದ್ರದ ಸಾಮಾಜಿಕ ನ್ಯಾಯ ಸಚಿವೆ ಕುಮಾರಿ ಶೆಲ್ಜಾ ಇಂತಹ ಹತ್ಯೆಗಳನ್ನು ನಡೆಸುವವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದರು.

ಹರಿಯಾಣದ ರೋಹ್ಟಕ್‌ ಜಿಲ್ಲೆಯ ಘರ್ನವತಿ ಗ್ರಾಮದಲ್ಲಿ ಬುಧವಾರ ಸಂಜೆ ಮಗಳು ಒಪ್ಪಿದ ಯುವಕನ ಜೊತೆ ಮದುವೆ ಮಾಡಲು ನಿರಾಕರಿಸಿ ಮಗಳನ್ನು ಕೊಚ್ಚಿ ಕೊಲೆ ಮಾಡಿ, ಯುವಕನ ರುಂಡವನ್ನು ಚೆಂಡಾಡಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.

ಇಂತಹ ಘಟನೆಗಳು ಇನ್ನಾವ ರಾಜ್ಯದಲ್ಲಿಯೂ ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳ­ಬೇಕು. ಸಮಾ­ಜದ ಪ್ರತಿ­ಯೊಬ್ಬರು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದರು.

ಪ್ರಸಕ್ತ ಘಟನೆಯಲ್ಲಿ ಕುಟುಂಬ­ದವರ ಪಾತ್ರವಿದೆ ಎಂದು ಆರೋಪಿಸ­ಲಾಗಿದೆ. ಆದರೂ ನಾವು ಯಾವ ತಪ್ಪನ್ನೂ ಮಾಡಿಲ್ಲ ಎಂದು ಕುಟುಂಬದ ಸದಸ್ಯರು ನಟಿಸುತ್ತಿದ್ದಾರೆ ಎಂದರು.

ಮುಜಫ್ಫರ್‌ನಗರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಒತ್ತಡ ಹೇರುವಿರಾ ಎಂದು ಕೇಳಿದ ಪ್ರಶ್ನೆಗೆ ಈ ಕುರಿತು ಸಂಬಂಧ­ಪಟ್ಟ ರಾಜ್ಯ ಸರ್ಕಾರ ನಿರ್ಧರಿಸಲಿದೆ ಎಂದರು.

ಈಗಾಗಲೇ ಉತ್ತರಪ್ರದೇಶ ಸರ್ಕಾರ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವು­ದಾಗಿ ತಿಳಿಸಿದೆ. ಸಮುದಾಯಗಳೂ ಪರಸ್ಪರ ಸಹಕಾರ­ದಿಂದ ಇದ್ದಲ್ಲಿ ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳ­ಬಹುದು ಎಂದರು.ಪಕ್ಷದ ಮುಖಂ­ಡರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿದ್ದಾರೆ ಎಂದು  ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.