ಇಸ್ಲಾಮಾಬಾದ್ (ಪಿಟಿಐ): ಭಯೋತ್ಪಾದನೆಗೆ ಕಮ್ಮಕ್ಕು ನೀಡುವ ಮೂಲಕ ಪಾಕಿಸ್ತಾನ ನಿರಂತರವಾಗಿ ಭಾರತಕ್ಕೆ ಉಪದ್ರವ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಪ್ರವಾಸದ ವೇಳೆ ಮಾಡಿದ್ದ ಟೀಕೆ ‘ದುರದೃಷ್ಟಕರ’ ಎಂದು ಪಾಕಿಸ್ತಾನವು ಮಂಗಳವಾರ ಜರೆದಿದೆ.
‘ಭಾರತದ ಪ್ರಧಾನಿ ಅವರು ದ್ವಿಪಕ್ಷೀಯ ಸಂಬಂಧಗಳನ್ನು ‘ಕಿರುಕುಳ’ ಎಂದಿರುವುದು ದುರದೃಷ್ಟಕರ’ ಎಂದು ಪಾಕ್ ವಿದೇಶಾಂಗ ಇಲಾಖೆ ವಕ್ತಾರ ಕ್ವಾಜಿ ಖಲಿಲ್ಉಲ್ಲಾ ತಿಳಿಸಿದ್ದಾರೆ.
ಪಾಕಿಸ್ತಾನವು ಭಾರತದ ಜತೆಗೆ ಶಾಂತಿಯುತ ಬಾಂಧವ್ಯ ಹಾಗೂ ಸೌಹಾರ್ದ ಸಂಬಂಧಗಳಲ್ಲಿ ಭರವಸೆ ಇಡುತ್ತದೆ ಎಂದು ಅವರು ತಿಳಿಸಿದ್ದಾರೆ.
‘ನೆರೆಯ ಸಾರ್ವಭೌಮ ರಾಷ್ಟ್ರದ ವಿರುದ್ಧ ಭಾರತ ನಕಾರಾತ್ಮಕ ಧೋರಣೆ ಹೊಂದಿದೆ ಎಂಬ ಪಾಕಿಸ್ತಾನ ನಿಲುವನ್ನು ಮೋದಿ ಅವರ ಹೇಳಿಕೆಗಳು ಸಮರ್ಥಿಸುತ್ತವೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
‘ಭಾರತದ ರಾಜಕಾರಣಿಗಳು ವಿಶ್ವಸಂಸ್ಥೆಯ ಸನ್ನದನ್ನು ಉಲ್ಲಂಘಿಸುವ ಜತೆಗೆ ಇತರ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಮಾಡಿದ ಹಸ್ತಕ್ಷೇಪವನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಿದ್ದಾರೆ’ ಎಂದೂ ಅವರು ಜರೆದಿದ್ದಾರೆ.
ಅಲ್ಲದೇ, ‘ಎರಡು ಸೋದರ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವೆ ವೈಷಮ್ಯದ ಬೀಜಗಳನ್ನು ಬಿತ್ತುವ ಭಾರತದ ಯತ್ನಗಳು ಫಲಪ್ರದವಾಗುವುದಿಲ್ಲ’ ಎಂದು ಅವರು ಒತ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.