ADVERTISEMENT

‘ಮೋದಿ ಮಾನವೀಯತೆಯ ಕೊಲೆಗಾರ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 11:18 IST
Last Updated 2 ಮಾರ್ಚ್ 2014, 11:18 IST

ಅಲಹಾಬಾದ್‌ (ಐಎಎನ್‌ಎಸ್‌): ‘ತೃತೀಯ ರಂಗ’ದ ಭೂಮಿಕೆಯಾಗಿ 11 ಪಕ್ಷಗಳು ಚುನಾವಣಾ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಅವರು ಭಾನುವಾರ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಮೋದಿ ಅವರನ್ನು ‘ಮಾನವೀಯತೆಯ ಕೊಲೆಗಡುಕ’ ಎಂದು ಟೀಕಿಸಿದ್ದಾರೆ.

ಇಲ್ಲಿನ ಪರೇಡ್‌ ಮೈದಾನದಲ್ಲಿ ನಡೆದ ‘ದೇಶ್‌ ಬಚಾವೋ ದೇಶ್ ಬನಾವೋ’ (ದೇಶ ರಕ್ಷಿಸಿ, ದೇಶ ನಿರ್ಮಿಸಿ) ಬೃಹತ್‌ ಮಾತನಾಡಿದ ಮುಲಾಯಂ ಸಿಂಗ್‌, ಎರಡೂ ಪ್ರಮುಖ ಪಕ್ಷಗಳು ದೇಶದ ಅಭಿವೃದ್ಧಿಗೆ ಅಪಾಯಕಾರಿ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧವೂ ಚಾಟಿ ಬೀಸಿದರು.

‘ಸಾಮೂಹಿಕ ಹತ್ಯೆಯ ಬಳಿಕ ಬಿಜೆಪಿ ಇದೀಗ ಕ್ಷಮೆ ಕೋರುತ್ತಿದೆ. ಇದು ಸ್ವೀಕರಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

ADVERTISEMENT

ಉತ್ತರ ಪ್ರದೇಶದಲ್ಲಿ ‘ಮೋದಿ ಅಲೆ’ಯನ್ನು ಅಲ್ಲಗಳೆದ ಅವರು ‘ಅಲ್ಲಿ ಗುಜರಾತ್‌ನಲ್ಲಿ ಇರುವಂತಹುದು ಏನೇನೂ ಇಲ್ಲ. ಅತಿಹೆಚ್ಚು ಕಲುಷಿತ ಹಾಗೂ ಮಲೀನವಾದ ನದಿಗಳು ಗುಜರಾತ್‌ನಲ್ಲಿವೆ ಎಂದು ತಜ್ಞರು ಹೇಳಿದ್ದಾರೆ’ ಎಂದು ತಿಳಿಸಿದರು.

ಕಾಂಗ್ರೆಸ್‌ ವಿರುದ್ಧವೂ ಹರಿಹಾಯ್ದ ಯಾದವ್‌, ‘ಬಡ ಜನತೆ ಹಾಗೂ ಅಲ್ಪಸಂಖ್ಯಾತರಿಗಾಗಿ  ಕಾಂಗ್ರೆಸ್‌ ಬಳಿ ಯಾವುದೇ ನೀತಿಗಳಿಲ್ಲ. ಕಾಂಗ್ರೆಸ್‌ ಕೈಯಲ್ಲಿ ದೇಶದ ಗಡಿಗಳೂ ಸುರಕ್ಷಿತವಾಗಿಲ್ಲ’ ಎಂದು ಚುಚ್ಚಿದರು.

ಮೋದಿ ತಿರುಗೇಟು: ಮುಲಾಯಂ ಸಿಂಗ್‌ ಟೀಕೆಗೆ ತಿರುಗೇಟು ನೀಡಿರುವ ಮೋದಿ, ಕಳೆದೊಂದು ವರ್ಷದಲ್ಲಿ ಉತ್ತರ ಪ್ರದೇಶದಲ್ಲಿ 150ಕ್ಕೂ ಅಧಿಕ ಗಲಭೆಗಳಾಗಿವೆ. ಕಳೆದೊಂದು ದಶಕದಲ್ಲಿ ಗುಜರಾತ್‌ನಲ್ಲಿ ಕನಿಷ್ಠ ಕರ್ಫ್ಯೂ ಕೂಡ ವಿಧಿಸಿಲ್ಲ’ ಎಂದಿದ್ದಾರೆ.

ಅಲ್ಲದೇ ‘ತಮ್ಮ ವೈಫಲ್ಯಗಳನ್ನು ಮರೆಮಾಚಿಕೊಳ್ಳಲು ಅವರು ಜಾತ್ಯತೀತತೆಯ ‘ಮುಖವಾಡ’ ಧರಿಸಿ ಜನತೆಯನ್ನು ದಾರಿತಪ್ಪಿಸುತ್ತಿದ್ದಾರೆ’ ಎಂದು ಎಸ್‌ಪಿ, ಬಿಎಸ್‌ಪಿ ಹಾಗೂ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.