ಅಗರ್ತಲಾ: ಬಿಜೆಪಿಯ 9 ಶಾಸಕರು ಮತ್ತು ಮಿತ್ರ ಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾದ (ಐಪಿಎಫ್ಟಿ) ಇಬ್ಬರು ಸೇರಿ ತ್ರಿಪುರಾದ 11 ಶಾಸಕರು ಸೋಮವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎಸ್ಎನ್ ಆರ್ಯ ಅವರು ಸಂಪುಟ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.ಮುಖ್ಯಮಂತ್ರಿ ಮಾಣಿಕ್ ಸಾಹಾ, ಮಾಜಿ ಮುಖ್ಯಮಂತ್ರಿ ವಿಪ್ಲಬ್ ಕುಮಾರ್ ದೇವ್ ಮತ್ತು ಬಿಜೆಪಿಯ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಪಿಎಫ್ಟಿಯ ಮೇವರ್ ಕುಮಾರ್ ಜಮಾತಿಯ ಅವರನ್ನು ಹೊರತುಪಡಿಸಿ ವಿಪ್ಲಬ್ ಕುಮಾರ್ ದೇವ್ ಸಂಪುಟದಲ್ಲಿದ್ದ ಎಲ್ಲಾ ಸಚಿವರು ಹೊಸ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
‘ಜಿಷ್ಣು ದೇವ್ ವರ್ಮಾ, ಎನ್ಸಿ ದೆಬ್ಬರ್ಮಾ (ಐಪಿಎಫ್ಟಿ), ರತನ್ ಲಾಲ್ ನಾಥ್, ಪ್ರಣಜಿತ್ ಸಿಂಗ್ ರಾಯ್, ಮನೋಜ್ ಕಾಂತಿ ದೇಬ್, ಸಂತಾನಾ ಚಕ್ಮಾ, ರಾಮ್ ಪ್ರಸಾದ್ ಪಾಲ್, ಭಗವನ್ ದಾಸ್, ಸುಶಾಂತ ಚೌಧುರಿ, ರಾಮಪಾದ ಜಮಾತಿಯ ಮತ್ತು ಪ್ರೇಮ್ ಕುಮಾರ್ ರಿಯಾಂಗ್ (ಐಪಿಎಫ್ಟಿ) ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶನಿವಾರ ಸಂಜೆ ವಿಪ್ಲವ್ ಕುಮಾರ್ ದೇವ್ ಹಠಾತ್ ರಾಜೀನಾಮೆ ನೀಡಿದ ಬಳಿಕ ಸಾಹಾ ಅವರ ಹೆಸರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಹೈಕಮಾಂಡ್ ಘೋಷಿಸಿತ್ತು. ಭಾನುವಾರ ಅವರು ಪ್ರಮಾಣವಚನ ಸ್ವೀಕರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.