ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ 12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಮರು ಪರೀಕ್ಷೆ ಏಪ್ರಿಲ್ 25ರಂದು ನಡೆಸಲು ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) ತೀರ್ಮಾನಿಸಿದೆ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಶಿಕ್ಷಣ ಕಾರ್ಯದರ್ಶಿ ಅನಿಲ್ ಸ್ವರೂಪ್, 10ನೇ ತರಗತಿಯ ಗಣಿತ ಪರೀಕ್ಷೆಯ ಮರು ಪರೀಕ್ಷೆ ಅಗತ್ಯವಿದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸಲಾಗುವುದು. ಅಗತ್ಯವಿದೆ ಎಂದಾದರೆ ಆ ಪರೀಕ್ಷೆ ಜುಲೈ ತಿಂಗಳಲ್ಲಿ ನಡೆಸಲಾಗುವುದು. ಗಣಿತ ಪರೀಕ್ಷೆ ದೆಹಲಿ ಮತ್ತು ಹರಿಯಾಣದಲ್ಲಿ ಮಾತ್ರ ನಡೆಯಲಿದೆ. ಅಂದರೆ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಇರುವುದಿಲ್ಲ.
10ನೇ ತರಗತಿಯ ಗಣಿತ ಪರೀಕ್ಷೆಯನ್ನು ಯಾವಾಗ ನಡೆಸಲಾಗುವುದು ಎಂದು ಕೇಳಿದಾಗ, 15 ದಿನಗಳೊಳಗೆ ದಿನಾಂಕ ತಿಳಿಸಲಾಗುವುದು ಎಂದು ಸ್ವರೂಪ್ ಹೇಳಿದ್ದಾರೆ.
12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಮರು ಪರೀಕ್ಷೆ ದಿನಾಂಕ ಮುಖ್ಯವಾದುದು. ಯಾಕೆಂದರೆ ವಿದ್ಯಾರ್ಥಿಗಳು ವಿಶ್ವ ವಿದ್ಯಾಲಯಕ್ಕೆ ಹೋಗಬೇಕಾದವರಾಗಿದ್ದಾರೆ ಎಂದಿದ್ದಾರೆ ಸ್ವರೂಪ್. ಸರಿಸುಮಾರು 2.2 ದಶಲಕ್ಷ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.