ADVERTISEMENT

ಹಕ್ಕಿಜ್ವರದ ಬಗ್ಗೆ ಆತಂಕ ಬೇಡ: ಏಮ್ಸ್‌ ಅಭಯ

ದೆಹಲಿಯಲ್ಲಿ 12 ವರ್ಷದ ಬಾಲಕ ಸಾವು

ಪಿಟಿಐ
Published 21 ಜುಲೈ 2021, 13:56 IST
Last Updated 21 ಜುಲೈ 2021, 13:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಹಕ್ಕಿಜ್ವರ ಮನುಷ್ಯನಿಂದ ಮನುಷ್ಯನಿಗೆ ಹರಡುವುದು ಅಪರೂಪ. ಈ ಕುರಿತು ಆತಂಕ ಬೇಡ’ ಎಂದು ಏಮ್ಸ್ ಮುಖ್ಯಸ್ಥ ಡಾ. ರಣದೀಪ್‌ ಗುಲ್ಹೆರಿಯಾ ಬುಧವಾರ ತಿಳಿಸಿದ್ದಾರೆ.

ಹಕ್ಕಿಜ್ವರದಿಂದ 12 ವರ್ಷದ ಬಾಲಕನೊಬ್ಬ ಏಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದರು. ಹೀಗಾಗಿ, ಗುಲ್ಹೆರಿಯಾ ಈ ಸ್ಪಷ್ಟನೆ ನೀಡಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಜುಲೈ 2ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಯ ವೇಳೆ ಕೋವಿಡ್ ಮತ್ತು ಹಕ್ಕಿಜ್ವರ ಕುರಿತು ಪರೀಕ್ಷೆ ನಡೆಸಲಾಗಿತ್ತು. ಕೋವಿಡ್ ವರದಿ ನೆಗೆಟಿವ್ ಬಂದಿತ್ತು. ಆದರೆ, ಹಕ್ಕಿಜ್ವರ ಇರುವುದು ಸಾಬೀತಾಗಿತ್ತು.

ADVERTISEMENT

ಈ ಬಗ್ಗೆ ವಿವರಣೆ ನೀಡಿರುವ ರಣದೀಪ್‌ ಗುಲ್ಹೆರಿಯಾ ಅವರು, ‘ಹಕ್ಕಿಜ್ವರದಿಂದ ಮೃತಪಟ್ಟ ಬಾಲಕ ವಾಸವಿದ್ದ ಪ್ರದೇಶದಲ್ಲಿ ಯಾರಿಗಾದರೂ ಸೋಂಕು ತಗುಲಿದೆಯೇ ಅಥವಾ ಕೋಳಿ ಸಾಕಣೆ ಕೇಂದ್ರದಲ್ಲಿ ಸಾವು ಸಂಭವಿಸಿದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯವಿದೆ’ ಎಂದು ಹೇಳಿದ್ದಾರೆ.

‘ಹಕ್ಕಿಗಳಿಂದ ಮನುಷ್ಯನಿಗೆ ಸೋಂಕು ಹರಡುವುದು ಅಪರೂಪ. ಮನುಷ್ಯನಿಂದ ಮನುಷ್ಯನಿಂದ ಹಬ್ಬುವುದು ಇನ್ನೂ ಸಾಬೀತಾಗಿಲ್ಲ. ಈ ಕಾರಣದಿಂದ ಆತಂಕಪಡುವುದು ಅಗತ್ಯವಿಲ್ಲ’ ಎಂದು ತಿಳಿಸಿದರು.

‘ಆದರೆ, ‌ಕೋಳಿಸಾಕಣೆ ಕೇಂದ್ರದ ಆಸುಪಾಸಿನಲ್ಲಿ ವಾಸಿಸುತ್ತಿರುವ ಜನರು ಮುಂಜಾಗ್ರತೆ ವಹಿಸುವುದು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವುದು ಅಗತ್ಯ’ ಎಂದು ಸಲಹೆ ಮಾಡಿದ್ದಾರೆ.

ಮೃತ ಬಾಲಕ ಹರಿಯಾಣದವನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.