ತಿರುವನಂತಪುರ: ಶಬರಿಮಲೆ ದೇವಸ್ಥಾನದ ಬಾಗಿಲನ್ನು ಶನಿವಾರ ಸಂಜೆ ತೆರೆಯಲಾಗಿದೆ. ಎಲ್ಲ ವಯೋಮಾನದ ಮಹಿಳೆಯರಿಗೂ ದೇಗುಲ ಪ್ರವೇಶಕ್ಕೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಮತ್ತೆ ಮಂಗಳವಾರ ಕೇರಳ ಪೊಲೀಸರು 12 ವರ್ಷದ ಬಾಲಕಿಯನ್ನು ತಡೆದಿದ್ದಾರೆ.
ಎಲ್ಲಾ ವಯೋಮಾನದ ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡುವುದಕ್ಕೆ ಸಂಬಂಧಿಸಿದ 2018ರ ತೀರ್ಪಿನ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ 7 ಜನರ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
ಈ ಮಧ್ಯೆ ಸೋಮವಾರವು ಎರಡಕ್ಕಿಂತ ಹೆಚ್ಚಿನ ಮಹಿಳೆಯರನ್ನು ತಡೆಯಲಾಗಿತ್ತು. ದೇಗುಲದ ಬಾಗಿಲು ತೆರೆದ ಮೊದಲ ದಿನವೇ ಸುಮಾರು 10 ಮಹಿಳೆಯರನ್ನು ದೇಗುಲ ಪ್ರವೇಶಿಸದಂತೆ ಪೊಲೀಸರು ತಡೆದಿದ್ದರು.
ಇದೀಗ ಕೇರಳ ಪೊಲೀಸರು ತನ್ನ ಕುಟುಂಬದೊಂದಿಗೆ ಪಾಂಡಿಚೆರಿಯಿಂದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತನ್ನ ತಂದೆ ಮತ್ತು ಇತರೆ ಸಂಬಂಧಿಗಳ ಜತೆಗೆ ಬಂದಿದ್ದ 12 ವರ್ಷದ ಬಾಲಕಿಯನ್ನು ಪಂಪಾ ಕ್ಯಾಂಪ್ನಲ್ಲೇ ತಡೆದಿದ್ದಾರೆ. ವಯೋಮಿತಿ ದಾಖಲೆಯನ್ನು ತೋರಿಸುವಂತೆ ಕೇಳಿದ್ದಾರೆ.
ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಪರಿಶೀಲನೆಯ ನಂತರ ಬಾಲಕಿಯ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಕುಟುಂಬ ಸದಸ್ಯರು ಮನವಿ ಮಾಡಿದರೂ ಪೊಲೀಸರು ನಿರಾಕರಿಸಿದ್ದಾರೆ. ಕುಟುಂಬಸ್ಥರು ಅಲ್ಲಿಂದ ಶಬರಿಮಲೆ ಯಾತ್ರೆಯನ್ನು ಮುಂದುವರಿಸಿದ್ದು, ಅಲ್ಲಿಂದ ಬಾಲಕಿಯನ್ನು ಕೋಣೆಗೆ ಕರೆದೊಯ್ದು ಕುಟುಂಬಸ್ಥರು ಹಿಂತಿರುಗುವವರೆಗೂ ಅಲ್ಲಿಯೇ ಕಾಯುವಂತೆ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.