ADVERTISEMENT

ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್- 5 ಭಾಷೆಗಳಲ್ಲಿ ಕನ್ನಡವಿಲ್ಲ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 19:30 IST
Last Updated 29 ಜುಲೈ 2021, 19:30 IST
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು   

ನವದೆಹಲಿ: ದೇಶದ ಎಂಟು ರಾಜ್ಯಗಳ 14 ಕಾಲೇಜುಗಳು ಐದು ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ ಬೋಧನೆ ಮಾಡಲಿವೆ. ತಮಿಳು, ತೆಲುಗು, ಹಿಂದಿ, ಮರಾಠಿ ಮತ್ತು ಬಂಗಾಳಿ ಭಾಷೆಯಲ್ಲಿ ಈ ಕಾಲೇಜುಗಳು ಎಂಜಿನಿಯರಿಂಗ್ ಕೋರ್ಸ್‌ ನಡೆಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಮಾಹಿತಿ ನೀಡಿದ್ದಾರೆ. ‘ಎಂಜಿನಿಯರಿಂಗ್ ಕೋರ್ಸ್‌ಗಳ ಪಠ್ಯಗಳನ್ನು ಭಾರತದ 11 ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುವ ಟೂಲ್ ಅನ್ನು ಸರ್ಕಾರವು ಅಭಿವೃದ್ಧಿಪಡಿಸಿದೆ’ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.

ಇದೇ ಭಾಷಣದಲ್ಲಿ ಅವರು ನೂತನ ಶಿಕ್ಷಣ ನೀತಿಯ ಹೊಸ ಯೋಜನೆಗಳನ್ನು ಪ್ರಕಟಿಸಿದರು. ಮೊದಲ ಹಂತದ ಶಾಲಾ ಶಿಕ್ಷಣ ಪ್ರವೇಶಕ್ಕೆ ಪೂರ್ವಬಾವಿಯಾಗಿ ಮಕ್ಕಳಿಗೆ ಆಟ ಆಧಾರಿತ ಮೂರು ತಿಂಗಳ ಕೋರ್ಸ್‌, ‘ವಿದ್ಯಾ ಪ್ರವೇಶ್’ ಅನ್ನು ಪ್ರಧಾನಿ ಘೋಷಿಸಿದರು.

ADVERTISEMENT

ಶೈಕ್ಷಣಿಕ ಅಂಕಗಳ ‘ಶೈಕ್ಷಣಿಕ ಬ್ಯಾಂಕ್’ ಅನ್ನು ಪ್ರಧಾನಿ ಘೋಷಿಸಿದರು. ‘ಕೋರ್ಸ್ ಮಧ್ಯದಲ್ಲಿ ವಿದ್ಯಾರ್ಥಿಯು ತನ್ನ ಇಚ್ಛೆಯ ವಿಷಯಗಳನ್ನು ಬದಲಿಸಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶವಿದೆ. ಹೀಗೆ ವಿಷಯ ಮತ್ತು ಕೋರ್ಸ್ ಬದಲಿಸಿದಾಗ ವಿದ್ಯಾರ್ಥಿಯ ಶೈಕ್ಷಣಿಕ ಮೌಲ್ಯಮಾಪನವನ್ನು ನಡೆಸಲು ಶೈಕ್ಷಣಿಕ ಬ್ಯಾಂಕ್ ನೆರವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇದನ್ನು ರೂಪಿಸಲಾಗಿದೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಅಲ್ಲದೆ, ವಿದ್ಯಾರ್ಥಿ ತನ್ನ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಈ ವ್ಯವಸ್ಥೆ ನೀಡಲಿದೆ’ ಎಂದು ಮೋದಿ ವಿವರಿಸಿದ್ದಾರೆ.

ವಿದ್ಯಾರ್ಥಿಗಳ ಪರೀಕ್ಷೆಯ ವ್ಯವಸ್ಥೆಯನ್ನು ಬದಲಿಸುವ ‘ಕಲಿಕಾಮಟ್ಟ ವಿಶ್ಲೇಷಣೆಗಾಗಿ ವ್ಯವಸ್ಥಿತ ಮೌಲ್ಯಮಾಪನ-ಸಫಲ್’ ವ್ಯವಸ್ಥೆಯನ್ನೂ ಪ್ರಧಾನಿ ಘೋಷಿಸಿದರು.

‘ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಇದಕ್ಕೆ ಶಿಕ್ಷಕರನ್ನು ಸಿದ್ಧಪಡಿಸಲು ಎನ್‌ಸಿಎಇಆರ್‌ಟಿ ‘ನಿಶಿತಾ 2.0’ ಎಂಬ ತರಬೇತಿ ಕಾರ್ಯಕ್ರಮವನ್ನು ಸಿದ್ಧಪಡಿಸಿದೆ. ಶಿಕ್ಷಕರಿಗೆ ಬೇಕಿರುವ ತರಬೇತಿ ಇದರಲ್ಲಿ ದೊರೆಯಲಿದೆ. ತರಬೇತಿ ಪಡೆದ ಶಿಕ್ಷಕರು ತಮ್ಮ ಶಿಕ್ಷಣ ಇಲಾಖೆಗೆ, ತಮ್ಮ ಅಗತ್ಯಗಳ ಬಗ್ಗೆ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತದೆ’ ಎಂದು ಪ್ರಧಾನಿ ವಿವರಿಸಿದ್ದಾರೆ.

‘ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಕೃತಕ ಬುದ್ಧಿಮತ್ತೆ ಮಹತ್ವದ ಪಾತ್ರ ವಹಿಸಲಿದೆ. ವಿದ್ಯಾರ್ಥಿಗಳನ್ನು ಅಂತಹ ವಾತಾವರಣಕ್ಕೆ ಸಿದ್ಧಪಡಿಸುವ ಕೃತಕ ಬುದ್ಧಿಮತ್ತೆ ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ. ಇದಕ್ಕಾಗಿ ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ವ್ಯವಸ್ಥೆ ಮತ್ತು ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ಫೋರಂಗಳು ಡಿಜಿಟಲ್ ಮತ್ತು ತಾಂತ್ರಿಕ ಯೋಜನೆಯನ್ನು ರೂಪಿಸಲಿವೆ’ ಎಂದು ಪ್ರಧಾನಿ ಹೇಳಿದ್ದಾರೆ.

‘ಸಂಜ್ಞಾ ಭಾಷೆಗೆ ಭಾಷಾ ವಿಷಯದ ಮಾನ್ಯತೆ ನೀಡಲಾಗಿದೆ. ಸಾಮಾನ್ಯ ವಿದ್ಯಾರ್ಥಿಗಳಿಗೂ ಸಂಜ್ಞಾ ಭಾಷೆಯನ್ನು, ಒಂದು ಭಾಷೆಯಾಗಿ ಕಲಿಸಲು ಅವಕಾಶವಿದೆ. ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕಲಿಕೆಗಾಗಿ ಸಂಜ್ಞಾಭಾಷೆಯನ್ನು ಅವಲಂಬಿಸಿದ್ದಾರೆ. ಈ ಹೊಸ ವ್ಯವಸ್ಥೆಯು ಭಾರತೀಯ ಸಂಜ್ಞಾ ಭಾಷೆಗೆ ಉತ್ತೇಜನ ನೀಡಲಿದೆ. ಇದರಿಂದ ಅಂಗವಿಕಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.