ಲಖನೌ: ಅಯೋಧ್ಯೆಯಲ್ಲಿ 151 ಮೀಟರ್ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ ಮಾಡುವ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಚಿಂತನೆ ನಡೆಸಿದ್ದಾರೆ.ದೀಪಾವಳಿಯ ಮುನ್ನ ಅಯೋಧ್ಯೆಗೆ ಭೇಟಿ ನೀಡಲಿರುವ ಆದಿತ್ಯನಾಥ ಪ್ರತಿಮೆ ನಿರ್ಮಾಣದ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಪ್ರತಿಮೆಯ ವಿನ್ಯಾಸ ಮತ್ತು ವಾಸ್ತುಶಿಲ್ಪಕ್ಕೆ ಟೆಂಡರ್ ಕರೆಯಲಾಗಿದ್ದು, ಈ ಬಗ್ಗೆ ಶಾರ್ಟ್ ಲಿಸ್ಟ್ ನಲ್ಲಿರುವ ಸಂಸ್ಥೆಗಳು ಮುಖ್ಯಮಂತ್ರಿಯವರ ಮುಂದೆ ವಿನ್ಯಾಸದ ಪ್ರಸ್ತುತಿ ಮಾಡಿವೆ.ಇವುಗಳಲ್ಲಿ ಕೆಲವು ಬದಲಾವಣೆ ಮಾಡಿ, ಉತ್ತಮವಾದ ಪ್ರಸ್ತುತಿಯನ್ನು ನಿರ್ಮಾಣ ಸಂಸ್ಥೆಗಳಿಗೆ ಕಳಿಸಿಕೊಡಲಾಗುವುದು ಎಂದು ಉತ್ತರ ಪ್ರದೇಶ ರಾಜಕೀಯ ನಿರ್ಮಾಣ ನಿಗಮದ (ಯುಪಿಆರ್ಎನ್ಎನ್) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಶಾರ್ಟ್ ಲಿಸ್ಟ್ ಮಾಡಿದ ಸಂಸ್ಥೆಗಳ ಪ್ರಸ್ತುತಿಯನ್ನು ಮುಖ್ಯಮಂತ್ರಿಯವರಿಗೆ ನೀಡಲಿರುವ ದಿನಾಂಕ ಇನ್ನೂ ಪ್ರಕಟವಾಗಿಲ್ಲ.
151 ಮೀಟರ್ ಎತ್ತರವಿರುವ ಪ್ರತಿಮೆಯ ಅಡಿಪಾಯ 50 ಮೀಟರ್ ಇರಲಿದ್ದು, ಒಟ್ಟು ಎತ್ತರ 201 ಮೀಟರ್ ಆಗಲಿದೆ.
ಯುಪಿಆರ್ಎನ್ಎನ್ ಸರಯೂ ನದಿತಟ ಅಭಿವೃದ್ದಿ ಮತ್ತು ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಮೆ ನಿರ್ಮಾಣಕ್ಕಾಗಿ ಅಂದಾಜು ₹775 ಕೋಟಿ ಮೌಲ್ಯದ ಟೆಂಡರ್ ಕರೆದಿತ್ತು.ಇದಕ್ಕಾಗಿ 5 ಸಂಸ್ಥೆಗಳು ಬಿಡ್ ಸಲ್ಲಿಸಿದ್ದು, ಇವು ಕೊಚ್ಚಿ, ಗ್ರೇಟರ್ ನೋಯ್ಡಾ ಮತ್ತು ಲಖನೌ ಮೂಲದವುಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.