ಅಗರ್ತಲಾ: ‘ತ್ರಿಪುರಾದ ಧಲಾಯಿ ಜಿಲ್ಲೆಯ ಹಳ್ಳಿಯೊಂದರಲ್ಲಿ ತನ್ನ ಕುಟುಂಬದ ಸದಸ್ಯರನ್ನು ಹಾಗೂ ನೆರೆ ಮನೆಯ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದನೆಂದು ಹೇಳಲಾಗಿರುವ 16 ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
‘ಕಮಲಾಪುರ ಉಪವಿಭಾಗ ವ್ಯಾಪ್ತಿಯ ನಿವಾಸಿಯಾದ ಈ ಬಾಲಕ ನಿತ್ಯವೂ ಮಾದಕವಸ್ತು ಸೇವಿಸುತ್ತಿದ್ದುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶನಿವಾರ ಬೆಳಿಗ್ಗೆ ಈತನ ತಂದೆ ಮನೆಯಲ್ಲಿ ಇಲ್ಲದ ವೇಳೆ ತನ್ನ ತಾಯಿ, ತಾತ, 10 ವರ್ಷದ ತಂಗಿ ಮತ್ತು ನೆರೆ ಮನೆಯ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಹತ್ಯೆ ಯಾವ ಕಾರಣಕ್ಕಾಗಿ ನಡೆದಿದೆ ಎಂಬುದು ತಿಳಿದುಬಂದಿಲ್ಲ’ ಎಂದರು.
‘ಘಟನೆ ಬಳಿಕ ಬಾಲಕನ ತಂದೆ ಮರಳಿ ಬಂದಾಗ ಮನೆಯಲ್ಲಿ ರಕ್ತ ಚೆಲ್ಲಿತ್ತು. ಮೃತ ದೇಹಗಳನ್ನು ಮನೆಯ ಪಕ್ಕದಲ್ಲೇ ಇರುವ ಬಾವಿಯಲ್ಲಿ ಎಸೆಯಲಾಗಿತ್ತು. ತಕ್ಷಣವೇ ಬಂಧಿತನ ತಂದೆ, ಊರಿನ ಜನರಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.