ADVERTISEMENT

’ಕೋವಿಡ್ 19‌’ ಮಾರ್ಗಸೂಚಿ ಅನ್ವಯ ದೇಶದಾದ್ಯಂತ 175 ಗಣ್ಯರಿಗೆ ಆಹ್ವಾನ

ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮ

ಪಿಟಿಐ
Published 4 ಆಗಸ್ಟ್ 2020, 7:43 IST
Last Updated 4 ಆಗಸ್ಟ್ 2020, 7:43 IST
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ (ಬಲ) ಅವರು ಸುದ್ದಿಗೋಷ್ಠಿಯ ವೇಳೆ ಮಾಧ್ಯಮದವರಿಗೆ ಕಾರ್ಯಕ್ರಮದ ಕುರಿತ ಮಾಹಿತಿ ನೀಡಿದರು –ಪಿಟಿಐ ಚಿತ್ರ
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ (ಬಲ) ಅವರು ಸುದ್ದಿಗೋಷ್ಠಿಯ ವೇಳೆ ಮಾಧ್ಯಮದವರಿಗೆ ಕಾರ್ಯಕ್ರಮದ ಕುರಿತ ಮಾಹಿತಿ ನೀಡಿದರು –ಪಿಟಿಐ ಚಿತ್ರ   

ಅಯೋಧ್ಯೆ: ‘ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಒಟ್ಟು 175 ಗಣ್ಯರನ್ನು ಆಹ್ವಾನಿಸಲಾಗಿದೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಸೋಮವಾರ ತಿಳಿಸಿದ್ದಾರೆ.

‘ಬಿಜೆಪಿ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ವಕೀಲ ಕೆ.ಪರಸರನ್‌ ಅವರ ಜೊತೆ ಚರ್ಚಿಸಿಯೇ ಗಣ್ಯರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ದೇಶದ ವಿವಿಧ ಭಾಗಗಳಿಂದ 135 ಮಂದಿ ಸಾಧು, ಸಂತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ಥಳೀಯವಾಗಿ ಜನಪ್ರಿಯ ವ್ಯಕ್ತಿಗಳಿಗೂ ಆಹ್ವಾನ ನೀಡಲಾಗಿದೆ’ ಎಂದಿದ್ದಾರೆ.

ADVERTISEMENT

‘ವಿಶ್ವ ಹಿಂದೂ ಪರಿಷತ್‌ನ ಮುಖಂಡರಾಗಿದ್ದ ದಿವಂಗತ ಅಶೋಕ್‌ ಸಿಂಘಾಲ್‌ ಅವರ ಸಹೋದರ ಸಂಬಂಧಿ ಸಲೀಲ್‌ ಸಿಂಘಾಲ್‌ ಅವರು ಕಾರ್ಯಕ್ರಮದ ‘ಯಜಮಾನ’ (ಧಾರ್ಮಿಕ ಪೋಷಕ) ರಾಗಿದ್ದಾರೆ. ನೇಪಾಳದಲ್ಲಿರುವ ಹಿಂದೂ ಸಮುದಾಯದ ಸಂತರನ್ನೂ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

‘ಭೂಮಿಪೂಜೆ ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರದ ಆವರಣದಲ್ಲಿ ಪಾರಿಜಾತ ಗಿಡವನ್ನು ನೆಡಲಿದ್ದಾರೆ. ಇದೇ ಸಂದರ್ಭದಲ್ಲಿ ಉತ್ತರಪ್ರದೇಶ ಸರ್ಕಾರವು ರಾಮಮಂದಿರ ವಿನ್ಯಾಸದ ಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ಕೋವಿಡ್‌–19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯವೇ ಗಣ್ಯರ ಪಟ್ಟಿಯನ್ನು ತಯಾರಿಸಲಾಗಿದೆ. ದೇವರ ಮೂರ್ತಿಗೆ ಯಾವ ದಿನ, ಯಾವ ಬಣ್ಣದ ದಿರಿಸು ತೊಡಿಸಬೇಕೆಂಬುದನ್ನು ಅರ್ಚಕರೇ ನಿರ್ಧರಿಸಲಿದ್ದಾರೆ. ಅವರ ತೀರ್ಮಾನವೇ ಅಂತಿಮ. ಯಾರೇ ಪ್ರಭಾವ ಬೀರಿದರೂ ಅದನ್ನು ಬದಲಿಸಲು ಸಾಧ್ಯವಿಲ್ಲ. ಸೋಮವಾರ ಶ್ವೇತವರ್ಣ, ಮಂಗಳವಾರ ಕೆಂಪುಬಣ್ಣ, ಬುಧವಾರ ಹಸಿರು ವರ್ಣದ ಉಡುಗೆ ತೊಡಿಸಲಾಗುತ್ತದೆ. ಹಳದಿ ಮತ್ತು ಕೇಸರಿ ಬಣ್ಣದ ಧಿರಿಸುಗಳನ್ನು ತೊಡಿಸುವ ಬಗ್ಗೆಯೂ ಚಿಂತಿಸಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.