ನವದೆಹಲಿ: ‘ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಮೇಲೆ ಆರ್ಬಿಐ ಹೇರಿರುವ ನಿರ್ಬಂಧವು ಇತರೆ ಹಣಕಾಸು ತಂತ್ರಜ್ಞಾನ ಕಂಪನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ನೆಲದ ಕಾನೂನನ್ನು ಎಂದಿಗೂ ಮೀರಬಾರದು ಎಂಬುದನ್ನು ಈ ಕಂಪನಿಗಳು ಮರೆಯಬಾರದು’ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಕುರಿತು ಆರ್ಬಿಐ ಕೈಗೊಂಡಿರುವ ನಿರ್ಧಾರವು, ಹಣಕಾಸು ತಂತ್ರಜ್ಞಾನ ಕಂಪನಿಗಳು ತಳಮಳಗೊಳ್ಳುವಂತೆ ಮಾಡಿದೆ ಎಂಬ ವಾದವನ್ನು ಸಚಿವ ರಾಜೀವ್ ಅವರು ಅಲ್ಲಗಳೆದರು. ‘ಈ ಇಡೀ ಪ್ರಕರಣವನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ. ಭಾರತದ್ದೇ ಕಂಪನಿಯಾಗಿರಲಿ, ವಿದೇಶಿ ಕಂಪನಿಯೇ ಆಗಿರಲಿ ಭಾರತದ ಕಾನೂನನ್ನು ಅನುಸರಿಸಲೇಬೇಕು’ ಎಂದರು.
‘ಒಬ್ಬ ಮಹಾತ್ವಾಕಾಂಕ್ಷಿ ಉದ್ಯಮಿಯು ತನ್ನಲ್ಲಿಯೇ ಅಪಾರ ನಂಬಿಕೆ ಇಡುತ್ತಾನೆ ಮತ್ತು ತನ್ನ ಕಂಪನಿಯನ್ನು ಎತ್ತರಕ್ಕೆ ಕೊಂಡೊಯ್ಯಲು ಶ್ರಮ ಹಾಕುತ್ತಾನೆ. ಆದರೆ, ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬ ನಿಯಮಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲನಾಗುತ್ತಾನೆ. ಅದು ಸಾಮಾಜಿಕ ಜಾಲತಾಣ ಕಂಪನಿಯೇ ಆಗಿರಲಿ ಅಥವಾ ಹಣಕಾಸು ತಂತ್ರಜ್ಞಾನ ಕಂಪನಿಯೇ ಆಗಿರಲಿ, ನಿಯಮಗಳನ್ನು ಮೀರಿ ತಪ್ಪಿಸಿಕೊಳ್ಳಬಹುದು ಎಂಬ ಮನಃಸ್ಥಿತಿ ಮಾತ್ರ ಇಲ್ಲ ಎಂದೇ ಈ ಪ್ರಕರಣವನ್ನು ನಾನು ಅರ್ಥೈಸುತ್ತೇನೆ’ ಎಂದು ಅವರು ಹೇಳಿದರು.
ಹಣಕಾಸು ತಂತ್ರಜ್ಞಾನ ಕಂಪೆನಿಗಳಿಗೆ ಸಂಬಂಧಿಸಿ ನಿಯಮಗಳನ್ನು ರೂಪಿಸುವುದು ಆರ್ಬಿಐ. ಆರ್ಬಿಐ ಮಾತನ್ನು ಕೇಳಲೇಬೇಕು ಮತ್ತು ಅದರ ನಿಯಮಗಳನ್ನು ಅನುಸರಿಸಲೇ ಬೇಕುರಾಜೀವ್ ಚಂದ್ರಶೇಖರ್ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.