ನವದೆಹಲಿ (ಐಎಎನ್ಎಸ್): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ, ಮಾಜಿ ಸಚಿವ ಎ.ರಾಜಾ ಅವರೊಂದಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರನ್ನು ಸಹ ಆರೋಪಿಯನ್ನಾಗಿ ಹೆಸರಿಸಿದ್ದಾರೆ.
‘ಇವರ ಜೊತೆಗೆ ಇನ್ನೂ ಹಲವರು ಈ ಹಗರಣದಲ್ಲಿ ಶಾಮೀಲಾಗಿದ್ದು ಮುಂದೆ ಅವರ ಹೆಸರುಗಳನ್ನೂ ಸೇರಿಸಲಾಗುತ್ತದೆ. ಈ ವಿಷಯ ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದೆ. ಅಲ್ಲದೇ ಸಿಬಿಐ ನಡೆಸುತ್ತಿರುವ ತನಿಖೆಯ ವ್ಯಾಪ್ತಿಗಿಂತಲೂ ಬಹಳ ಸ್ಥೂಲವಾಗಿದೆ’ ಎಂದು ಅವರು ಶನಿವಾರ ಕೋರ್ಟ್ಗೆ ತಿಳಿಸಿದರು.
ಸ್ವಾಮಿ ಅವರು ಪ್ರಸ್ತಾಪಿಸಿರುವಂತೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ ಸಿಬಿಐ ತನಿಖೆ ವ್ಯಾಪ್ತಿಗೆ ಬರುವುದೇ ಎಂಬ ಬಗ್ಗೆ ವಿಸ್ತೃತ ವರದಿ ಸಲ್ಲಿಸುವಂತೆ ತಿಳಿಸಿ, ಕೋರ್ಟ್ ತನಿಖಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ಮಹಾಲೇಖಪಾಲರ ವರದಿ ಪ್ರಕಾರ, ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂಪಾಯಿಯಷ್ಟು ಭಾರಿ ನಷ್ಟ ಉಂಟು ಮಾಡಿರುವ ಹಗರಣದ ಆರೋಪಿ ರಾಜಾ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸ್ವಾಮಿ ಕೋರಿದ್ದಾರೆ.
ಈ ಖಾಸಗಿ ದೂರಿಗೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಮಹಾಲೇಖಪಾಲ ವಿನೋದ್ ರಾಯ್ ಅವರ ಹಾಜರಾತಿಗೆ ಕೋರ್ಟ್ ಸೂಚಿಸಿತ್ತು.
ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ವರದಿಯ ಪ್ರಮಾಣೀಕೃತ ಪ್ರತಿಯನ್ನು ರಾಯ್ ತಮ್ಮ ವಕೀಲ ಸಂದೀಪ್ ಸೇಥಿ ಅವರ ಮೂಲಕ ಕೋರ್ಟ್ಗೆ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.