ADVERTISEMENT

2 ವಾರದಲ್ಲಿ ಈರುಳ್ಳಿ ಬೆಲೆ ಇಳಿಕೆ: ಪವಾರ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ಮಾರುಕಟ್ಟೆಗೆ ಹೊಸ ಈರುಳ್ಳಿ ಬರಲಿದ್ದು, ಎರಡು ಅಥವಾ ಮೂರು ವಾರಗಳಲ್ಲಿ ದರದಲ್ಲಿ ಇಳಿಕೆ­­ಯಾಗಲಿದೆ ಎನ್ನುವ ವಿಶ್ವಾಸವನ್ನು ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ ಗ್ರಾಹಕರು ಶಿಘ್ರದಲ್ಲಿಯೇ ದರ ಏರಿಕೆಯಿಂದ ಮುಕ್ತಿ ಪಡೆಯ­ಬಹುದು ಎಂದು ಅವರು ಹೇಳಿದರು.ರೈತರು ಮತ್ತು ವರ್ತಕರೊಂದಿಗೆ ಮಾತು­ಕತೆ ನಡೆಸಿದ ಬಳಿಕ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಎರಡು ಮೂರು ವಾರದಲ್ಲಿ ಮುಂಗಾರು ಈರುಳ್ಳಿ ಕೊಯ್ಲಿಗೆ ಬರಲಿದೆ ಎಂದರು.

ಸ್ವಲ್ಪ ಪ್ರಮಾಣದಲ್ಲಿ ಈರುಳ್ಳಿಯನ್ನು  ಆಮದು ಮಾಡಿಕೊಂಡಿರುವುದರಿಂದ ಹಾಗೂ ಈರುಳ್ಳಿ ರಫ್ತಿನ ಮೇಲೆ ಕನಿಷ್ಠ ಬೆಲೆ  ವಿಧಿಸಿರುವುದರಿಂದ ರಫ್ತು ಪ್ರಮಾಣ ತಗ್ಗಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಹೆಚ್ಚಿದೆ ಎಂದರು.

ಅತಿ ಹೆಚ್ಚು ದಾಸ್ತಾನು ಹೊಂದಿರುವ ಮಹಾರಾಷ್ಟ್ರದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರದಂತೆ ತಡೆಹಿಡಿದಿರುವುದಕ್ಕೆ ಕಾಂಗ್ರೆಸ್‌ ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.

ದೇಶದಾದ್ಯಂತ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹಠಾತ್ತನೆ ಏರಿದೆ. ರಾಜಧಾನಿಯಲ್ಲಿ 1ಕೆ.ಜಿ ಈರುಳ್ಳಿಯ ಚಿಲ್ಲರೆ ಮಾರಾಟ ದರ ರೂ70–80 ಇದ್ದು, ಒಂದು ವರ್ಷದ ಹಿಂದೆ ಈ ದರ ರೂ22 ಇತ್ತು.

ಈ ಸಂಬಂಧ ಪವಾರ್‌ ಅವರು ಗ್ರಾಹಕ ವ್ಯವಹಾರ ಸಚಿವ ಕೆ.ವಿ.ಥಾಮಸ್‌ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.