ನಾಸಿಕ್/ಮುಂಬೈ: ಆಮ್ಲಜನಕ ಸಂಗ್ರಹಣಾ ಘಟಕದಲ್ಲಿ ಉಂಟಾದ ಸೋರಿಕೆಯಿಂದ ರೋಗಿಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ನಾಸಿಕ್ನ ಮುನ್ಸಿಪಲ್ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದ 22 ಕೊರೊನಾ ಸೋಂಕಿತ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಸೂರಜ್ ಮಂಧಾರೆ ತಿಳಿಸಿದ್ದಾರೆ.
ಈಗಿರುವ ಮಾಹಿತಿ ಪ್ರಕಾರ, ಜಾಕಿರ್ ಹುಸೇನ್ ಮುನ್ಸಿಪಲ್ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ 22 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ಅಷ್ಟೂ ರೋಗಿಗಳಿಗೆ ವೆಂಟಿಲೇಟರ್ ನೆರವಿನೊಂದಿಗೆ ಚಿಕಿತ್ಸೆ ನೀಡುವ ಜೊತೆಗೆ, ಆಮ್ಲಜನಕವನ್ನು ಪೂರೈಸಲಾಗುತ್ತಿತ್ತು. ಆಮ್ಲಜನಕ ಟ್ಯಾಂಕ್ನಲ್ಲಿ ಸೋರಿಕೆಯಾದ ಕಾರಣ, ರೋಗಿಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಾಸವಾದ ಕಾರಣ ಈ ದುರ್ಘಟನೆ ಸಂಭವಿಸಿದೆ‘ ಎಂದು ಜಿಲ್ಲಾಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
ಆಸ್ಪತ್ರೆಯಲ್ಲಿ, 150 ಕ್ಕೂ ಹೆಚ್ಚು ರೋಗಿಗಳು ವೆಂಟಿಲೇಟರ್ ಮತ್ತು ಆಮ್ಲಜನಕದ ನೆರವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದರು. ವಿಷಯ ತಿಳಿಯುತ್ತಿದ್ದಂತೆ ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿ, ಹೆಚ್ಚು ಬೇಡಿಕೆ ಇರದ ಕಡೆಗಳಿಂದ ಆಮ್ಲಜನಕದ ಟ್ಯಾಂಕ್ಗಳನ್ನು ತಂದು ಝಾಕಿರ್ ಹುಸೇನ್ ಮುನ್ಸಿಪಲ್ ಆಸ್ಪತ್ರೆಗೆ ಸ್ಥಳಾಂತರಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಸಚಿವ ರಾಜೇಶ್ ಟೋಪೆ, ‘ಆಮ್ಲಜನಕದ ಟ್ಯಾಂಕ್ಗಳಲ್ಲಿ ಉಂಟಾದ ಸೋರಿಕೆಯಿಂದಾಗಿ ಈ ಘಟನೆ ಸಂಭವಿಸಿದ ಎಂದು ಶಂಕಿಸಲಾಗಿದೆ. ಈ ಕುರಿತು ತನಿಖೆ ನಡೆಸಲಾಗುವುದು‘ ಎಂದು ಹೇಳಿದರು.
ಈ ನಡುವೆ ಸಂಗ್ರಹ ಟ್ಯಾಂಕ್ನಿಂದ ಆಮ್ಲಜನಕ ಸೋರಿಕೆಯಾಗುತ್ತಿರುವ ವಿಡಿಯೊವೊಂದು ಬುಧವಾರ ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತರ ಸಂಬಂಧಿಕರು ‘ಆಮ್ಲಜನಕ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವೇ ಸಾವಿಗೆ ಕಾರಣ‘ ಎಂದು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.