ನವದೆಹಲಿ: ಸಂಸತ್ನ ಬಜೆಟ್ ಅಧಿವೇಶನದ 23 ದಿನಗಳ ವೇತನ ಪಡೆಯದಿರಲು ಎನ್ಡಿಎ ಸಂಸದರು ನಿರ್ಧರಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.
ಪ್ರತಿಪಕ್ಷಗಳು ತೀವ್ರ ಗದ್ದಲ ಸೃಷ್ಟಿಸಿದ್ದರಿಂದಾಗಿ ಬಜೆಟ್ ಅಧಿವೇಶನದ 23 ದಿನಗಳ ಕಲಾಪ ವ್ಯರ್ಥವಾಗಿದೆ. ಹೀಗಾಗಿ ಅಷ್ಟೂ ದಿನಗಳ ವೇತನ ಪಡೆಯದಿರಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಜತೆಗೆ, ಕಲಾಪ ವ್ಯರ್ಥವಾಗಲು ಕಾಂಗ್ರೆಸ್ಸೇ ಕಾರಣ ಎಂದು ದೂರಿದ್ದಾರೆ.
‘ಪ್ರಧಾನ ಮಂತ್ರಿಗಳು, ಬಿಜೆಪಿ ಅಧ್ಯಕ್ಷರು ಮತ್ತು ಎನ್ಡಿಎ ಮಿತ್ರಪಕ್ಷಗಳ ಜತೆ ಚರ್ಚಿಸಿ ಬಜೆಟ್ ಅಧಿವೇಶನದ ಎರಡನೇ ಭಾಗದ ಕಲಾಪಗಳ ವೇತನ ತ್ಯಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಜನರ ಸೇವೆ ಮಾಡುವುದಕ್ಕಾಗಿ ನಮಗೆ ಈ ಹಣ ನೀಡಲಾಗುತ್ತಿದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ವಿಷಯ ಕಲಾಪದಲ್ಲಿ ಚರ್ಚೆಯಾಗಿಲ್ಲ ಎಂದ ಮೇಲೆ ನಮಗೆ ಆ ಹಣ ಪಡೆಯಲು ಅಧಿಕಾರವಿಲ್ಲ. ಅದನ್ನು ಜನರಿಗೇ ವಾಪಸ್ ನೀಡುತ್ತಿದ್ದೇವೆ’ ಎಂದು ಅನಂತಕುಮಾರ್ ಹೇಳಿದ್ದಾರೆ.
ಇತರ ಪ್ರತಿಪಕ್ಷಗಳ ಜತೆ ಸೇರಿಕೊಂಡು ಪ್ರಮುಖ ಮೂಸದೆಗಳಿಗೆ ಅನುಮೋದನೆ ಪಡೆಯುವುದಕ್ಕೆ ಕಾಂಗ್ರೆಸ್ ತಡೆಯೊಡ್ಡಿದೆ. ಇದರಿಂದ ತೆರಿಗೆದಾರರ ಹಣ ಪೋಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.