ADVERTISEMENT

ಛತ್ತೀಸ್‌ಗಡದಲ್ಲಿ ನಕ್ಸಲ್‌ ದಾಳಿ: ನಾಲ್ವರು ಯೋಧರು ಹುತಾತ್ಮ

ಏಜೆನ್ಸೀಸ್
Published 27 ಅಕ್ಟೋಬರ್ 2018, 14:54 IST
Last Updated 27 ಅಕ್ಟೋಬರ್ 2018, 14:54 IST
   

ರಾಯಪುರ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಛತ್ತೀಸ್‌ಗಡ ರಾಜ್ಯದಲ್ಲಿ ನಕ್ಸಲರು ನಡೆಸಿದ ನೆಲಬಾಂಬ್‌ ದಾಳಿಯಲ್ಲಿ ನಾಲ್ವರು ಕೇಂದ್ರ ಮೀಸಲು ಪಡೆ (ಸಿಆರ್‌ಪಿಎಫ್‌) ಯೋಧರು ಮೃತಪಟ್ಟಿದ್ದು ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಿಜಾಪುರ ಜಿಲ್ಲೆ ಅವಾಪಲ್ಲಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ 4.30ಕ್ಕೆ ಈ ಘಟನೆ ನಡೆದಿದೆ. ಮಾವೋವಾದಿಗಳ ಪ್ರಭಾವ ಹೆಚ್ಚಿರುವ ಪ್ರದೇಶದಲ್ಲಿ ಸಿಆರ್‌ಪಿಎಪ್‌ ಯೋಧರು ವಾಹನದಲ್ಲಿ ಗಸ್ತು ತಿರುಗುವಾಗ ಬಾಂಬ್ ದಾಳಿ ನಡೆಸಲಾಗಿದೆ.

ಸಿಆರ್‌ಪಿಎಫ್‌ನ 180ನೇ ಬೆಟಾಲಿಯನ್‌ ಅವಾಪಲ್ಲಿಯಲ್ಲಿ ಕ್ಯಾಂಪ್‌ ಹಾಕಿಕೊಂಡು ನಕ್ಸಲರ ಕಾರ್ಯಾಚರಣೆಗೆ ಮುಂದಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.ಸೇನೆಯ ಗಸ್ತುವಾಹನದಲ್ಲಿ 6 ಜನ ಯೋಧರಿದ್ದರು.ಕ್ಯಾಂಪ್‌ನಿಂದ ಒಂದು ಕೀ.ಮೀ ದೂರದಲ್ಲಿ ಈ ಘಟನೆ ನಡೆದಿದೆ.

ADVERTISEMENT

ರಸ್ತೆಯಲ್ಲಿ ಹುದುಗಿಸಿಟ್ಟಿದ್ದ ಬಾಂಬ್‌ ಸ್ಫೋಟಿಸಿ ನಕ್ಸಲರು ದಾಳಿ ನಡೆಸಿದ್ದಾರೆ ಎಂದು ಛತ್ತೀಸ್‌ಗಡ ಪೊಲೀಸ್‌ ಮಹಾನಿರ್ದೇಶಕ ವಿವೇಕಾನಂದ ಸಿನ್ಹಾ ಹೇಳಿದ್ದಾರೆ.

ಪ್ರಬಲ ಸ್ಫೋಟಕ್ಕೆ ವಾಹನ ಛಿದ್ರವಾಗಿದ್ದು ಸ್ಥಳದಲ್ಲೇ ನಾಲ್ವರು ಯೋಧರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಈ ದಾಳಿಯ ಬಳಿಕ ನಕ್ಸಲರಿಗಾಗಿ ಕಾರ್ಯಾಚರಣೆಆರಂಭಿಸಲಾಗಿದೆ ಎಂದು ಪೋಲೀಸರುತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.