ಗುವಾಹಟಿ:ಎಡಬಿಡದೆ ಸುರಿಯುತ್ತಿರುವಮಳೆಯಿಂದಾಗಿ ಪ್ರವಾಹದಲ್ಲಿ ಸಿಲುಕಿರುವಅಸ್ಸಾಂನಲ್ಲಿ ಬುಧವಾರ ಪರಿಸ್ಥಿತಿ ಅಲ್ಪಮಟ್ಟಿಗೆ ಸುಧಾರಿಸಿದೆ. ಆದಾಗ್ಯೂ ದಕ್ಷಿಣ ಅಸ್ಸಾಂನಲ್ಲಿ ಮನೆಯಿಂದ ಹೊರಬರದಂತೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಈ ಮಧ್ಯೆ, ಬುಧವಾರ ಅಸ್ಸಾಂ–ಅಗರ್ತಲಾ ರಾಷ್ಟ್ರೀಯ ಹೆದ್ದಾರಿಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಹಲವೆಡೆ ಭೂಕುಸಿತ ಸಂಭವಿಸಿರುವುದರಿಂದ ರೈಲುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಅಸ್ಸಾಂ ಮತ್ತು ಬಿಹಾರ ರಾಜ್ಯಗಳಿಗೆ ಅಗತ್ಯ ವಸ್ತುಗಳ ಸಾಗಣೆಗೆ ತೊಡಕುಂಟಾಗುವ ಭೀತಿ ಎದುರಾಗಿದೆ. ಈ ಬೆನ್ನಲ್ಲೇ ಬಿಹಾರ ಸರ್ಕಾರ ಪೆಟ್ರೋಲ್ ಡೀಸೆಲ್ ಖರೀದಿಗೆ ಮಿತಿ ಹೇರಿದೆ. ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನ ಮೂಲಕ ಅಗತ್ಯ ವಸ್ತುಗಳನ್ನು ಪಡೆಯುವ ಬಗ್ಗೆ ಚಿಂತನೆ ನಡೆಸುತ್ತಿದೆ.
ದಿಬ್ಬ ನಿರ್ಮಾಣ:ಪ್ರವಾಹ ಸಂದರ್ಭದಲ್ಲಿ ವನ್ಯ ಜೀವಿಗಳುರಕ್ಷಣೆ ಪಡೆಯಲು ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತಿತರ ಅರಣ್ಯ ಪ್ರದೇಶಗಳಲ್ಲಿ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ 40 ನೂತನ ದಿಬ್ಬಗಳನ್ನು ನಿರ್ಮಾಣ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಸ್ಸಾಂ ಅರಣ್ಯ ಸಚಿವ ಪರಿಮಳ್ ಸುಕ್ಲಬೈದ್ಯ, ‘ಪ್ರಾಣಿಗಳಿಗೆ ಅಗತ್ಯವಿರುವ ಹುಲ್ಲು, ನೆಲ್ಲಿಕಾಯಿ ಸೇರಿದಂತೆ ವಿವಿಧ ರೀತಿಯ ಹಣ್ಣಿ ಮರಗಳು ಇರುವಂತೆ ದಿಬ್ಬಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಪ್ರವಾಹ ಸಂದರ್ಭದಲ್ಲಿ ಪ್ರಾಣಿಗಳು ಸಾವನ್ನಪ್ಪುವುದನ್ನು ತಡೆಗಟ್ಟಬಹುದು. ಅಷ್ಟೇ ಅಲ್ಲದೆ, ಕಾಜಿರಂಗ ರಾಷ್ಟ್ರೀಯ ವನ್ಯದಾಮದಲ್ಲಿ ಪ್ರಾಣಿಗಳ ರಕ್ಷಣೆಗೆಂದೇ 25 ಬೋಟ್ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.